ಗೋಕರ್ಣ: ಸಾಮಾಜಿಕವಾದ ಅನೇಕ ಋಣಗಳು ನಮ್ಮ ಮೇಲಿವೆ. ದೀನರ ಆರ್ತರ ಕಣ್ಣೊರೆಸುವುದೂ ಒಂದು ಭಗವತ್ಪ್ರೀತಿ ಸಾಧನವಾದ ಕಾರ್ಯವೇ. ಸಾಧ್ಯವಾದಷ್ಟರಮಟ್ಟಿಗೆ ನಮ್ಮಿಂದ ಇನ್ನೊಬ್ಬರಿಗೆ ಸಹಾಯ, ಸಹಕಾರಗಳು ಲಭ್ಯವಾಗುವ ರೀತಿಯಲ್ಲಿ ಬಾಳಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ  ಹೊರನಾಡಿನ ಚೆನ್ನೈ ವಲಯದ ಶಿಷ್ಯಸಮುದಾಯದ ಶ್ರೀಗುರುದೇವತಾಸೇವೆಯನ್ನು ಹಾಗೂ ಗಾವಡಿ ಸಮಾಜದ ಶ್ರೀಗುರುಪಾದುಕಾಪೂಜೆಯನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಎಷ್ಟು ವರ್ಷ ಬದುಕುತ್ತೇವೆನ್ನುವುದಕ್ಕಿಂತ ಯಾವರೀತಿಯಲ್ಲಿ ನಾವು ಬದುಕುತ್ತೇವೆಂಬುದು ಮುಖ್ಯ. ಜೀವನವು ಒಂದು ನೌಕೆಯಾದರೆ ಧಾರ್ಮಿಕತೆಯು ಅದರ ಮಾರ್ಗಸೂಚಿ. ನಾವು ಆಚರಿಸಿದ ಧರ್ಮ ಮಾತ್ರ ನಮ್ಮನ್ನು ಆಪತ್ಕಾಲದಲ್ಲಿ ಕಾಪಾಡುತ್ತದೆ ಎಂದೂ ನುಡಿದರು. ಇದೇ ಸಂದರ್ಭದಲ್ಲಿ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಕೋಟಿರುದ್ರ ಕಾರ್ಯಕ್ಕೆ ನಾಡಿನ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ ಯೋಜಿಸಿರುವ ‘ಇ-ಹುಂಡಿ’ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿದ ಪೂಜ್ಯಶ್ರೀಗಳು, ವೇಗವಾಗಿ ಬೆಳೆಯುತ್ತಿರುವ ಇಂದಿನ ತಾಂತ್ರಿಕಜ್ಞಾನದ ಮುಖಾಂತರ ಮನೆಯಲ್ಲಿಯೇ ಕುಳಿತು ಶ್ರೀದೇವಾಲಯಕ್ಕೆ ಕಾಣಿಕೆಯನ್ನು ಸಮರ್ಪಿಸಬಹುದಾಗಿದ್ದು, ಈ ಸೇವೆಯ ಲಾಭವನ್ನು ಎಲ್ಲರೂ ಪಡೆಯುವಂತಾಗಲೆಂದು ಆಶಿಸಿದರಲ್ಲದೆ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರ ಕಾಲದಿಂದಲೂ ಶ್ರೀಮಠಕ್ಕೂ ಮತ್ತು ಬ್ಯಾಂಕಿಗೂ ಇರುವ ಉತ್ತಮಸಂಬಂಧವನ್ನು ಸ್ಮರಿಸಿ ನಾಡಿನ ಜನತೆಗೆ ಹಣಕಾಸು ವಿಷಯದಲ್ಲಿ ಶ್ರೇಷ್ಠಸೇವೆಯನ್ನು ನೀಡುತ್ತಿರುವ ಕರ್ಣಾಟಕ ಬ್ಯಾಂಕಿಗೆ ಇನ್ನೂ ಹೆಚ್ಚಿನ ಶ್ರೇಯೋಭಿವೃದ್ಧಿಯನ್ನುಹಾರೈಸಿದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಯರಾಮ ಭಟ್ಟರು, ಡಿ.ಜಿ.ಎಮ್. ಶ್ರೀ ರಾಮಚಂದ್ರ ಭಟ್, ಬ್ಯಾಂಕಿನ ಮಾಜಿ ನಿರ್ದೇಶಕ ಶ್ರೀ ಭೀಮ ಭಟ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.
‘ಇ-ಹುಂಡಿ’ ವ್ಯವಸ್ಥೆಯಲ್ಲಿ ಈ ಕೆಳಗಿನ ಕೊಂಡಿಯನ್ನು ಸಂದರ್ಶಿಸುವ ಮೂಲಕ ಭಾಗವಹಿಸಬಹುದು

http://www.karnatakabank.com/ktk/EHundi.jsp
Click “Continue” button below Koti Rudra Samithi Gokarna

Facebook Comments Box