ಗೋಕರ್ಣ: ಹರಿಯುವ ತಿಳಿನೀರಿನ ನದಿಯಲ್ಲಿ ಯಾವ ಕೊಳೆಯೂ ಇರದು. ಸ್ವಚ್ಛ ಮತ್ತು ಶುದ್ಧವಾದ ನೀರು ಸಾತ್ವಿಕಗುಣದ ದ್ಯೋತಕ. ಸದಾ ಪರಹಿತವನ್ನೇ ಬಯಸುತ್ತ ಬದುಕಿನಲ್ಲಿ ಒಳಿತನ್ನೇ ಕಾಣುತ್ತ ಜೀವಿಸುವ ವ್ಯಕ್ತಿಗೆ ಪರಮಾತ್ಮಪ್ರಾಪ್ತಿಗೆ ಬೇರಾವ ತಪಸ್ಸೂ ಬೇಡ. ಅವನ ಲೋಕಹಿತಂಕರಕಾರ್ಯವನ್ನು ಅರಸುತ್ತ ಸುಖವೇ ಅವನ ಬಳಿ ಬರುತ್ತದೆ. ಪರಿಶುದ್ಧ ಮನಸ್ಸು ಭಗವಂತನ ಕೊಡುಗೆ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ರಾಮಕಥಾದಲ್ಲಿ ಪ್ರವಚನ ನೀಡುತ್ತಿದ್ದ ಪೂಜ್ಯಶ್ರೀಗಳು ವಿಭೀಷಣ ಆಪತ್ತಿನ ಸ್ಥಿತಿಯಲ್ಲಿಯೂ ವಿಚಲಿತವಾಗದ ವರವನ್ನು ಕೇಳಿದ್ದ. ಕೊನೆಗೆ ಮಾನಸಸರೋವರದ ಪ್ರದೇಶವೇ ಆತನ ವಾಸಸ್ಥಾನವಾದದ್ದಲ್ಲದೆ ಮಾನಸಸರೋವರವು ರಕ್ಷಿಸಿದ ನಿರ್ಮಲಮಾನಸದ ಗಂಧರ್ವರಾಜನಾದ ಶೈಲೂಷನ ಪುತ್ರಿ ಸರಮೆಯು ಅವನಿಗೆ ಜೀವನ ಸಂಗಾತಿಯಾಗಿಯೂ ದೊರೆತಳು. ಒಳ್ಳೆಯ ವ್ಯಕ್ತಿಗಳಿಗೆ ಅಂತಹ ಮನೋಭಾವದದವರೇ ಸಹಚರರಾಗುತ್ತಾರೆ. ಯೋಗವುಳ್ಳವರು ಮಾನಸಯಾತ್ರೆ ಮಾಡಿದರೆ ಮಹಾಯೋಗವುಳ್ಳವರ ಸನಿಹಕ್ಕೆ ಮಾನಸವೇ ಬರುತ್ತದೆ ಎಂಬುದಕ್ಕೆ ಇದು ನಿದರ್ಶನ ಎಂದು ಹೇಳಿ ಸದ್ಬುದ್ಧಿಯನ್ನು ಹೇಳಬಹುದಾಗಿದ್ದ ಅಣ್ಣ ಕುಬೇರನೂ ದೂರಾದ ಮೇಲೆ ರಾವಣನ ಲೋಕಪೀಡೆ ಅಧಿಕವಾಗುತ್ತ ಹೋಯಿತು. ಯೌವ್ವನ, ಸಂಪತ್ತು, ಅಧಿಕಾರ, ಅವಿವೇಕ ಈ ನಾಲ್ಕರಲ್ಲಿ ಒಂದೊಂದೂ ವ್ಯಕ್ತಿಯ ಅವನತಿಗೆ ಕಾರಣವಾಗುವಾಗ ಈ ನಾಲ್ಕೂ ಸೇರಿದ್ದ ರಾವಣನಿಗೆ ಅಪ್ರತಿಮ ಬಾಹುಬಲವೂ ಸೇರಿದ್ದು ಅವನ ಎಲ್ಲ ದುರಾಚಾರಗಳಿಗೆ ದ್ವಾರವಾಯಿತು. ತಮ್ಮನ ಮೇಲಿನ ಆಪಾದನೆಗಳನ್ನು ಕೇಳಿ ವ್ಯಥಿತನಾದ ಕುಬೇರ ಕುಲೋಚಿತವಾಧ ಧರ್ಮವನ್ನು ಅನುಸರಿಸುವಂತೆ ಪರಪೀಡೆಯನ್ನು ಮಾಡದಂತೆ ರಾವಣನಿಗೆ ಬುದ್ಧಿ ಹೇಳಿದರೂ, ಅದು ಯಾವ ಬದಲಾವಣೆಯನ್ನೂ ಉಂಟುಮಾಡಲಿಲ್ಲ. ತಂದೆ ಮೊದಲೇ ರಾವಣನ್ನು ದೂರಮಾಡಿದ್ದ. ಹೀಗಾಗಿ ಅಕೃತ್ಯಗಳಿಗೆ ತಡೆಯೊಡ್ಡುವವರೇ ಇಲ್ಲದಂತಾಗಿ ರಾವಣ ತನ್ನ ವಿನಾಶವನ್ನು ತಾನೇ ತಂದುಕೊಂಡ. ಧರ್ಮಾತ್ಮನಾದ ಕುಬೇರನು ನಮ್ಮಲ್ಲಿರುವ ಸಾತ್ವಿಕಗುಣಕ್ಕೆ ಪ್ರತೀಕವಾದರೆ ರಾವಣ ನಮ್ಮಲ್ಲಿರಬಹುದಾದ ದುಷ್ಟತನಕ್ಕೆ ಸಂಕೇತವಾಗುತ್ತಾನೆ. ನಮ್ಮೊಳಗಿನ ಅಂತರಾತ್ಮನ ಸದ್ವಿವೇಕವು ಸದಾ ಎಚ್ಚರಿಸುತ್ತಲೇ ಇದ್ದರೂ ನಾವು ಅದನ್ನು ಕೇಳದೆ ಹಾಳಾಗುತ್ತೇವೆ ಎಂದು ಹೇಳಿ ವಾಲ್ಮೀಕಿಮಹರ್ಷಿಗಳ ತಾತ್ವಿಕವಿಚಾರ ಹಾಗೂ ಒಳನೋಟಗಳನ್ನೊಳಗೊಂಡ ರಾಮಾಯಣವು ನಮ್ಮ ಬದುಕಿನ ದರ್ಶನವೂ ಹೌದು ಎಂದು ನುಡಿದರು.
ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಸಂದ್ಯಾ ಭಟ್, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು, ಶ್ರೀ ರಾಘವೇಂದ್ರ ಹೆಗಡೆಯವರ ಮರಳುಚಿತ್ರ, ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬಾ ಮನೋಹರವಾಗಿದ್ದವು. ಮಂಗಳೂರು ಮಂಡಲದ ಬಾಯಾರು, ಕನ್ಯಾನ, ಕೇಪು ಹಾಗೂ ವಿಟ್ಲ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು
August 19, 2011 at 10:28 AM
ಹರೇರಾಮ. ಮನಸ್ಸು ಎಂದಿಗೂ ಪರಿಶುದ್ಧವಾಗಿರುವಂತೆ ಹರಸಿ ಗುರುಗಳೇ.
August 20, 2011 at 12:49 PM
ಚಿಕ್ಕದಾಗಿ ಚೊಕ್ಕದಾಗಿ ತತ್ತ್ವವನ್ನು ಸೆರೆಹಿಡಿದುಕೊ೦ಡು ಬರುತ್ತಿದೆ ಈ ಸುದ್ದಿಗಳು, ತು೦ಬು ಧನ್ಯವಾದಗಳು.
.
ಶ್ರೀ ಗುರುಭ್ಯೋ ನಮಃ