ಶ್ರೀ ರಘೂತ್ತಮ ಮಠ ಕೆಕ್ಕಾರು : 17.08.2014, ಭಾನುವಾರ

ಡಾ|| ಎಸ್.ಆರ್. ರಾಮಸ್ವಾಮಿ ರಚಿಸಿದ ಆಚಾರ್ಯ ಚಾಣಕ್ಯ ಕೃತಿ ಹಾಗೂ ರಘುನಂದನ ಬೇರ್ಕಡವು ಹಾಡಿರುವ ಮಂಗಳದ ಮುಂಬೆಳಕು ಧ್ವನಿ ಮುದ್ರಿಕೆಯನ್ನು ಲೋಕಾರ್ಪಣೆಗೊಳಿಸಿದ ಶ್ರೀಗಳು ಕಾರ್ಯಕ್ಷಮತೆ ಮತ್ತು ನಿಸ್ವಾರ್ಥ ಸೇವೆ ಚಾಣಕ್ಯನ ವೈಶಿಷ್ಟ್ಯ, ಅದು ನಮ್ಮಲ್ಲಿ ಸ್ಪೂರ್ತಿ ತುಂಬುವ ವ್ಯಕ್ತಿತ್ವ ಎಂದು ನುಡಿದರು. ಅರುಣ ಎನ್. ಹೆಗಡೆ ಮಾನೀರ ಮತ್ತು ಜಿ.ಕೆ. ಭಟ್ಟ ಬೆಂಗಳೂರು ಪ್ರಾಯೋಜಕತ್ವ ವಹಿಸಿದ್ದರು. ಕೃಷ್ಣಾಷ್ಟಮಿಯ ನಿಮಿತ್ತ ಏರ್ಪಡಿಸಲಾಗಿದ್ದ ಅವಲಕ್ಕಿ ಹಬ್ಬವನ್ನು ನರಸಪ್ಪನ್ ಕುಟುಂಬದವರು ಪ್ರಾಯೋಜಿಸಿದ್ದರು. ಹಂದಿಗೋಣ ಮಾತೃ ವಿಭಾಗದವರು ಆಯುರ್ವೇದ ಚಿಕಿತ್ಸಾ ಶಿಬಿರ ಸಂಘಟಿಸಿ ೧.೫ ಲಕ್ಷ ರೂಪಾಯಿ ಮೌಲ್ಯದ ಔಷಧಿಗಳನ್ನು ವಿತರಿಸಿದರು. ಜಯ ಚಾತುರ್ಮಾಸ್ಯ ಸಮಿತಿಯ ಸಂಪರ್ಕ ಕಾರ್ಯದರ್ಶಿ ರವೀಂದ್ರ ಭಟ್ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿ ನಿರೂಪಿಸಿದರು. ಎಸ್.ಎ. ಭಟ್ಟ ಕೆಕ್ಕಾರು ಇವರು ಜಯ ಚಾತುರ್ಮಾಸ್ಯದ ೧ ತಿಂಗಳ ಸವಿನೆನಪಿನ ಫೋಟೋ ಆಲ್ಬಮ್ನ್ನು ಶ್ರೀಗಳವರಿಗೆ ಸಮರ್ಪಿಸಿದರು. ನರಸಪ್ಪನ್ ಕುಟುಂಬದವರು, ಶ್ರೀಕಾಂತ ಪಂಡಿತ್, ಆಯುರ್ವೇದ ವೈದ್ಯರು ವಿಶೇಷ ಅನುಗ್ರಹ ಪಡೆದರು.

ಶ್ರೀ ಶ್ರೀಗಳ ಪ್ರವಚನ:

’ಸೆರೆಯಲ್ಲಿ ಹುಟ್ಟಿ ನಮ್ಮೆಲ್ಲರ ಭವದ ಸೆರೆ ಬಿಡಿಸಿದವ ಶ್ರೀಕೃಷ್ಣ ’

ಸೆರೆಯಲ್ಲಿ ಹುಟ್ಟಿ ನಮ್ಮೆಲ್ಲರ ಭವದ ಸೆರೆ ಬಿಡಿಸಿದ ಭಗವಂತ ಶ್ರೀಕೃಷ್ಣ. ತಾನೇನೂ ಆಗದೇ ಯಾರ್ಯಾರು ಎನೇನು ಆಗಬೇಕೋ ಅದನ್ನು ಮಾಡಿದ ಕೃಷ್ಣ ’ಕಿಂಗ್’ ಆಗಲಿಲ್ಲ ಕಿಂಗ್ ಮೇಕರ್ ಆದ. ಶ್ರೀ ಕೃಷ್ಣ ನಮ್ಮೆಲ್ಲರನ್ನೂ ಎಲ್ಲಾ ಅನಾಹುತಗಳಿಂದ ಪಾರು ಮಾಡಲಿ ಎಂದು ರಾಘವೇಶ್ವರ ಶ್ರೀಗಳು ನುಡಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ಸಂದರ್ಭದಲ್ಲಿ ಮೊಸರು ಕಡೆಯುವ ಮಹಿಳೆಯರ ಕಾರ್ಯಕ್ರಮ ಸಂದರ್ಭೋಚಿತವಾದದ್ದು. ಎಲ್ಲವನ್ನೂ ಯಂತ್ರಗಳೇ ಮಾಡುತ್ತಿರುವ ಈ ಕಾಲದಲ್ಲಿ ಮೊಸರು ಕಡೆಯುವುದನ್ನು ನೋಡುವುದೇ ಒಂದು ಭಾಗ್ಯ. ಎಲ್ಲಿ ಮೊಸರು ಕಡೆಯುವ ಸದ್ದು ಕೇಳುತ್ತದೋ, ಪುಟ್ಟ ಮಕ್ಕಳ ನಡೆ ಎಲ್ಲಿರುತ್ತದೋ, ಗುರುವಿಗೆ ಗೌರವ ಪೂಜೆ ಎಲ್ಲಿ ಸಲ್ಲುತ್ತದೋ ಅದೇ ನಿಜವಾದ ಮನೆ. ಅಂದು ಮನೆ ತುಂಬ ಮಕ್ಕಳಿದ್ದರೆ ಕುಟುಂಬ ಕಲ್ಯಾಣ ಎನ್ನುತ್ತಿದ್ದರು. ಇಂದು ಮಕ್ಕಳು ಬೇಡವೆಂಬುದಕ್ಕೆ ಕುಟುಂಬ ಕಲ್ಯಾಣ ಎಂದು ಹೆಸರಿಸಿರುವುದು ವಿಪರ್ಯಾಸ. ನಮ್ಮ ಜೀವನದಲ್ಲಿ ಮರೆತು ಹೋದದನ್ನು ನೆನಪಿಸುವ ಕಾರ್ಯಕ್ರಮ ಮಾಡಿದ ಕುಮಟಾ – ಹೊನ್ನಾವರ ಮಂಡಲದ ಕಾಮದುಘಾ ಹಾಗೂ ಮಾತೃ ವಿಭಾಗದವರಿಗೆ ಶ್ರೀ ಕೃಷ್ಣನ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.

’ರಾಮಕಥಾ ’

ಎರಡನೇ ಹಂತದ ರಾಮಕಥೆ :- ಅಗಸ್ಟ್ ೧೮ರಿಂದ ೨೪ ರವರೆಗೆ ಎರಡನೇ ಹಂತದ ರಾಮಕಥೆ ನಡೆಯಲಿದ್ದು ಶ್ರೀಗಳವರ ಪ್ರವಚನದೊಂದಿಗೆ ಗೀತ-ನೃತ್ಯ-ಚಿತ್ರ ಇತ್ಯಾದಿ ದೃಶ್ಯ ಶ್ರಾವ್ಯ ಕಲಾಮಾಧ್ಯಮಗಳ ಮೂಲಕ ವಾಲ್ಮೀಕಿ ರಾಮಾಯಣದ ಪುನರವತರಣ ನಡೆಯಲಿದೆ. ಪ್ರತಿದಿನ ಸಂಜೆ ೬.೦೦ ರಿಂದ ನಡೆಯಲಿರುವ ರಾಮಕಥಾದಲ್ಲಿ ಭಾಗವಹಿಸಿ ರಾಮಾನುಗ್ರಹಕ್ಕೆ ಪಾತ್ರರಾಗುವಂತೆ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಎಂ.ಕೆ. ಹೆಗಡೆ ರಾಮಕಥಾ ಸಮಿತಿಯ ಸಂಚಾಲಕರಾದ ಸುಬ್ರಾಯ ಭಟ್ಟ ಹಾಗೂ ಜಿ.ಜಿ. ಭಟ್ಟ ಹೊನ್ನಾವರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments Box