ಬೆಳಕಿನ ಪ್ರಭುವಿನ, ಬೆಳಕಿನ ರಾಜ್ಯದ, ಬೆಳಕಿನ ಪ್ರಜೆಗಳಿಗೆ ಬೆಳಕಿನ ಹಬ್ಬದ ಬೆಳಗಿನಲ್ಲಿ, ಬೆಳಕಿನ ಬದುಕನ್ನು ಹಾರೈಸುವುದು ಬೆಳಕಿನಿಂದ, ಬೆಳಕಿಗಾಗಿ, ಬೆಳಕಿನಲ್ಲಿ, ಬೆಳಕಾಗಿ, ಬೆಳಕೀಯಲೆಂದೇ ಉಸಿರಾಡುವ ಪರಂಪರೆ ಶ್ರೀರಾಮಚಂದ್ರಾಪುರ ಮಠದ್ದು.  ಅಂತಹ ಪರಂಪರೆಯ ಪೀಠದಿಂದ ಬೆಳಕಿನ ಹಬ್ಬದ ಶುಭಹಾರೈಕೆಗಳನ್ನು ದೀಪಾವಳಿಯ ಸಂದರ್ಭದಲ್ಲಿ  ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ  ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾಣಿಯ ಶಾಖಾಮಠದಲ್ಲಿ ನೀಡಿದರು.

ಇದೇ ಸಂದರ್ಭದಲ್ಲಿ ಶಾಖಾಮಠದ ಅಂತರಜಾಲ ತಾಣ www.perajemata.in ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶ್ರೀಗಳು, ಮಠ ಮತ್ತು ಮರ ಇವುಗಳಲ್ಲಿ ವ್ಯತ್ಯಾಸ ಒಂದು ಚುಕ್ಕಿ ಮಾತ್ರ. ಮರ ಹೇಗೆ ಪಕ್ಷಿ, ಜೀವಿಗಳಿಗೆ ತನ್ನ ಕೊಂಬೆ ರೆಂಬೆ ಗಳ ಮೂಲಕ ನೆರಳು ಆಶ್ರಯ ನೀಡುತ್ತದೆಯೋ ಅದೇ ರೀತಿ ಮಠ ಸಮಾಜದ ಸುಖ ದುಃಖಗಳಿಗೆ ಸ್ಪಂದಿಸಿ ಸಾಂತ್ವಾನ ನೀಡುವುದಕ್ಕಾಗಿ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಣಿ ಮಠದಲ್ಲಿ ನೂತನ ಸಭಾಭವನದ ಕಾಮಗಾರಿಯನ್ನು ವೀಕ್ಷಿಸಿ, ದೀಪಾವಳಿಯ ಪ್ರಯುಕ್ತ ವಿಶೇಷ ಗೋಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನೂತನ ಸಭಾಭವನ ನಿರ್ಮಾಣ ಮಹಾಸಮಿತಿಯ ಅಧ್ಯಕ್ಷರಾದ ನಾರಾಯಣ ಭಟ್ ಹಾರಕೆರೆ, ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು, ಶಂಕರ ಭಟ್ ಪಟಿಕಲ್ ಮತ್ತಿತರರು ಉಪಸ್ಥಿತರಿದ್ದರು.

Facebook Comments Box