ಶ್ರೀ ರಘೂತ್ತಮ ಮಠ ಕೆಕ್ಕಾರು : 11.08.2014, ಸೋಮವಾರ

ಡಾ || ರಾಮಕೃಷ್ಣ ಪೆಜತ್ತಾಯ ರಚಿಸಿದ ಮಹರ್ಷಿಪಾಣಿನಿ ಕೃತಿಯನ್ನು ಹಾಗೂ ಭಟ್ಕಳ ಹವ್ಯಕ ವಲಯದಿಂದ ಪ್ರಕಟವಾದ ನೀಲಕಂಠ ಯಾಜಿ ಸಂಪಾದಿಸಿದ ಮಾಹಿತಿ ಗಳನ್ನೊಳಗೊಂಡ ಸುಗಮಸಂಪರ್ಕ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಗೋಪಾಲಕೃಷ್ಣ ಉಗ್ರು ಪ್ರಾಯೋಜಕತ್ವ ವಹಿಸಿದ್ದರು. ಶಂಕರ ಸೂಕ್ತಿ ಪಟವನ್ನು ಡಾ|| ಎಂ. ಪಿ. ಕರ್ಕಿ ಬಿಡುಗಡೆಗೊಳಿಸಿದರು. ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿದರು. ಎಸ್. ಜಿ. ಭಟ್ಟ ನಿರೂಪಿಸಿದರು. ಹೊನ್ನಾವರ ಮಂಡಲದ ಮರವಂತೆ, ಭವತಾರಿಣಿ, ಭಟ್ಕಳ, ಹೊನ್ನಾವರ ವಲಯದವರಿಂದ ಸರ್ವಸೇವೆ ನೆರವೇರಿತು. ಉಪ್ಪಾರ ಸಮಾಜದವರು ಶ್ರೀಗಳಿಂದ ವಿಶೇಷ ಅನುಗ್ರಹ ಪಡೆದರು.

ಶ್ರೀ ಶ್ರೀಗಳ ಪ್ರವಚನ:

’ಸಂಸ್ಕೃತ ಮೃತ ಭಾಷೆಯಲ್ಲ. ಅಮೃತ ಭಾಷೆ .’

ದೇಹವನ್ನು ದೇಶವೆಂದು ಭಾವಿಸಿದರೆ ಆತ್ಮ ಆದೇಶದ ರಾಜನಿದ್ದಂತೆ. ಮನಸ್ಸು ಮಂತ್ರಿಯಂತೆ, ಎಲ್ಲ ಇಂದ್ರಿಯಗಳು ಪ್ರಜೆಗಳಂತೆ, ಆತ್ಮದ ಶಾಸನ ದೇಹವೆಂಬ ರಾಜ್ಯದಲ್ಲಿ ನಡೆದರೆ ಅದು ರಾಮರಾಜ್ಯವಾಗುತ್ತದೆ. ಇಲ್ಲದಿದ್ದಲ್ಲಿ ರಾವಣ ರಾಜ್ಯವಾಗುತ್ತದೆ ಎಂದು ರಾಘವೇಶ್ವರ ಶ್ರೀಗಳುನುಡಿದರು. ಜಯಚಾತುರ್ಮಾಸ್ಯದ ಮೂವತ್ತೊಂದನೆ ದಿನದ ಧರ್ಮಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬುದ್ಧಿಯೆನ್ನುವುದು ದೊಡ್ಡ ಸಂಪತ್ತು, ಅದಿಲ್ಲದಿದ್ದರೆ ಯಾವಸಂಪತ್ತಿದ್ದರೂ ವ್ಯರ್ಥ. ಬುದ್ಧಿ ಇಲ್ಲದವನಿಗೆ ಯಾವ ಸಂಪತ್ತು ದೊರೆತರೂ ಅದು ಅನರ್ಥವನ್ನೇ ಉಂಟುಮಾಡುತ್ತದೆ. ರಾವಣ ದುರ್ಯೋಧನರೇ ಇದಕ್ಕೆ ಉದಾಹರಣೆ ಎಂದು ಅವರು ನುಡಿದರು. ನಮ್ಮ ಬದುಕಿನಲ್ಲಿ ಹೀಗಿರು, ಹೀಗಿರಬೇಡ ಎಂದು ತಿಳಿಹೇಳುವ ಉದ್ದೇಶದಿಂದಲೇ ಶಾಸ್ತ್ರ ನಿಯಮ ರೂಪಿತವಾಗಿದೆ. ಅವು ಸರ್ವಮಾನ್ಯ. ಇದು ಸರಿ – ಇದು ದಾರಿ ಎಂಬುದನ್ನು ಅವು ನಮಗೆ ತೋರಿಸಿಕೊಡುತ್ತದೆ. ಹಾಗಾಗಿ ಶಾಸ್ತ್ರ ನಿಯಮ ಮೀರದಿರಿ ಎಂದರು. ಪ್ರಯತ್ನ ಪಟ್ಟರೆ ಅಸಾಧ್ಯವೆಂಬುದು ಯಾವುದೂ ಇಲ್ಲ ಎಂಬುದನ್ನು ಪ್ರಪಂಚಕ್ಕೆ ತೋರಿಸಿದ ಮಹರ್ಷಿ ಪಾಣಿನಿ ನಮ್ಮೆಲ್ಲರ ಪ್ರಯತ್ನಕ್ಕೆ ಸ್ಫೂರ್ತಿ. ವ್ಯಾಕರಣದ ಮೂಲವಾದ ಮಾಹೇಶ್ವರ ಸೂತ್ರಗಳನ್ನು ತಪಸ್ಸಿನಿಂದ ಪಡೆದ ಮಹಾತ್ಮರು ಅವರು. ದೇವತೆಗಳಿಂದ ಪ್ರಪಂಚ ನಿರ್ಮಾಣವಾದಂತೆ ದೇವಭಾಷೆಯಿಂದ ಪ್ರಪಂಚದ ಇತರ ಭಾಷೆಗಳು ಬಂದವು. ಸಂಸ್ಕೃತ ಮೃತ ಭಾಷೆಯಲ್ಲ. ಅಮೃತ ಭಾಷೆ ಎಂದ ಶ್ರೀಗಳು ಇಂದು ಲೋಕಾರ್ಪಣೆಗೊಂಡ ಕೃತಿಗಳ ಸಂದೇಶ ನಿಮ್ಮೆಲ್ಲರ ಜೀವನದಲ್ಲಿ ಜಯ ತರಲಿ ಎಂದು ಹಾರೈಸಿದರು.

Facebook Comments Box