|| ಹರೇರಾಮ ||
ವಂಶವೆಂದರೆ ದೇವರ ದೀಪೋತ್ಸವವಿದ್ದಂತೆ..!
ದೀಪೋತ್ಸವದಲ್ಲಿ ದೇವರ ನಂದಾದೀಪದಿಂದ ದೀಪವೊಂದನ್ನು ಹೊತ್ತಿಸಿ,
ತದನಂತರ ಒಂದು ದೀಪದಿಂದ ಇನ್ನೊಂದು, ಅದರಿಂದ ಮತ್ತೊಂದು
ಎಂಬಂತೆ ಸಾವಿರಾರು ದೀಪಗಳನ್ನು ಬೆಳಗುವಂತೆ,
ಈಶ್ವರನಿಂದ ಆರಂಭಿಸಿ ನಮ್ಮವರೆಗೆ ಬೆಳಗಿ ಬರುವ
ಚೇತನದೀಪಮಾಲಿಕೆಯೇ ಅಲ್ಲವೇ ವಂಶವೆಂದರೆ..?
ವಂಶವೆಂದರೆ ನಮ್ಮನ್ನು ದೇವರೊಡನೆ,
ಪ್ರಕೃತಬಿಂದುವನ್ನು ಪ್ರಥಮಬಿಂದುವಿನೊಡನೆ ಬೆಸೆಯುವ ಚೇತನ ಸೇತು..
ಇದು ಅರ್ಥವಾಗಬೇಕಾದರೆ ನಾವು ಹಿಂದೆ ಹಿಂದೆ ಹೋಗಬೇಕು..
ನಮ್ಮ ಹಿಂದೆ ನಮ್ಮ ತಂದೆ-ತಾಯಿಗಳು,
ನಮ್ಮ ತಂದೆ-ತಾಯಿಗಳ ಹಿಂದೆ ಅವರ ತಂದೆ-ತಾಯಿಗಳು,
ಅವರ ಹಿಂದೆ ಅವರ ತಂದೆ-ತಾಯಿಗಳು,
ಹೀಗೆಯೇ ಹಿಂದೆ ಹಿಂದೆ ಹೋದರೆ,
ಮೂಲದಲ್ಲಿ ವಿಶ್ವಜನನೀ-ಜನಕರು…!
ಪಿತೃಗಳೆಂದರೆ ಪರಸ್ಪರ ಬೆಸೆದುಕೊಂಡು, ನಮ್ಮ- ಈಶ್ವರನ ಮಧ್ಯೆ ಸಂಪರ್ಕ ಕಲ್ಪಿಸುವ ಸಜೀವ ಕೊಂಡಿಗಳು.
ಸಂಸಾರದ ನದಿಯ ಈಚೆಯ ದಡದಲ್ಲಿ ಜೀವನಿದ್ದರೆ..
ಈಶ್ವರನಿರುವುದು ಆಚೆಯ ದಡದಲ್ಲಿ..
ಎರಡೂ ದಡಗಳನ್ನು ಬೆಸೆಯುವ, ಚೇತನಗಳಿಂದಲೇ ನಿರ್ಮಿತವಾದ ಸೇತುವೆಯೇ ವಂಶ..
ವಂಶವೆಂದರೆ ಸೃಷ್ಟಿಯ ಮೊಟ್ಟಮೊದಲ ಶಕ್ತಿಯು ನಮ್ಮವರೆಗೆ ಹರಿದು ಬರುವ ಚೈತನ್ಯ ತಂತು.
ಭಾರತೀಯ ಸಂಸ್ಕೃತಿಯಲ್ಲಿ ಕುಲಕ್ಕೆ ಅದೆಷ್ಟು ಪ್ರಾಶಸ್ತ್ಯ..!
ಏಕೆಂದರೆ ಕುಲವೆಷ್ಟು ಶುದ್ಧವೋ ನಮ್ಮೆಡೆಗೆ ಈಶ್ವರನ ಚೈತನ್ಯದ ಹರಿವೂ ಅಷ್ಟೇ ನಿರಾತಂಕ.
ನಡುನಡುವೆ ಜನಿಸುವ ಕಲಂಕಿತ ವ್ಯಕ್ತಿತ್ವಗಳು ಚೈತನ್ಯದ ಹರಿವಿಗೆ ತಡೆಗಳು..
ಶ್ರೀರಾಮನುದಯಿಸಿದ್ದು, ಶ್ರೀರಾಮಾಯಣ ಘಟಿಸಿದ್ದು, ಸಾಟಿಯೇ ಇಲ್ಲದ ಸೂರ್ಯವಂಶದಲ್ಲಿ..
ಅದೆಷ್ಟು ಪುರಾತನವಾದ ವಂಶವೆಂದರೆ,ಅದರ ಆದಿಯನ್ನು ಕಾಣಬೇಕೆಂದರೆ ಸೃಷ್ಟಿಪೂರ್ವಾವಸ್ಥೆಗೇ ಹೋಗಬೇಕು..!
ಅಂದು ಸೃಷ್ಟೀಶ್ವರನಿದ್ದನು..
ಆದರೆ ಸೃಷ್ಟಿಯಿರಲಿಲ್ಲ…!
ಕಾಲವೇ ಹುಟ್ಟಿರದ ಕಾಲವದು..!
ನೀರ ಮೇಲೆ ನಾರಾಯಣನೊಬ್ಬನೇ ಪವಡಿಸಿದ್ದನಂದು..
ಬದುಕಿನ ಒಂದನೇ ತತ್ತ್ವಕ್ಕೂ ಒಂಟಿತನ ಬೇಸರವೆಸಿತೇನೋ…?
ಬಹುವಾಗಬಯಸಿತದು..ಜಗವಾಗಬಯಸಿತದು..!
ಮೊದಲ ತತ್ವದ ಆ ಮೊದಲ ಕಾಮನೆಯರಳಿತು ಕಮಲವಾಗಿ..
ಸೃಷ್ಟಿಯ ಪ್ರಥಮಾಂಕುರವೆನಿಸಿದ ಆದಿಕಮಲದಲ್ಲಿ ಆವಿರ್ಭವಿಸಿದನು ವಿಶ್ವಸ್ರಷ್ಟಾ..
ಯಂತ್ರಗಳಿಲ್ಲದೆ..
ಕಾರ್ಮಿಕರಿಲ್ಲದೆ..
ಕಟ್ಟಡಗಳಿಲ್ಲದೆ..
ಕಚ್ಛಾವಸ್ತುಗಳಿಲ್ಲದೆ..
ಆರಂಭವಾಯಿತು ಸೃಷ್ಟಿಯೆಂಬ ಕಾರ್ಖಾನೆ…!!
ಆದಿನಾರಾಯಣನ ಕಾಮನಾಮಾತ್ರದಿಂದ ಕಮಲ-ಕಮಲಜರು ಸಂಭವಿಸಿದರೆ,
ಕಮಲಜನ ಸಂಕಲ್ಪಮಾತ್ರದಿಂದ ಮರೀಚಿಯೇ ಮೊದಲಾದ ಸೃಷ್ಟಿಕಾರಕರಾದ,
ಸೃಷ್ಟಿಗುಪಕಾರಕರಾದ ಶಕ್ತಿರೂಪದ ವ್ಯಕ್ತಿಗಳು ಜನಿಸಿದರು..
ಸೃಷ್ಟಿವೃಕ್ಷದ ಕಾಂಡಸ್ವರೂಪವಾದ ಕಶ್ಯಪರು ಮರೀಚಿಯಿಂದ ಸಂಭವಿಸಿದರು..
ಧರ್ಮಸಂತಾನವನ್ನು ಬಯಸಿದ ಕಶ್ಯಪರು ಅದಿತಿ, ದಿತಿ, ದನು ಮೊದಲಾದ ದಕ್ಷಸುತೆಯರನ್ನು ವರಿಸಿದರು..
ಬೇರೆ ಬೇರೆ ವಿಧವಾದ ಪಾತ್ರೆಗಳಲ್ಲಿ ನಿಹಿತವಾದ ನೀರು ಬೇರೆ ಬೇರೆ ಆಕಾರಗಳನ್ನು ತಾಳುವಂತೆ ..
ಪರಮರ್ಷಿಗಳಾದ ಕಶ್ಯಪರ ಮಹಾತೇಜಸ್ಸು ಬೇರೆ ಬೇರೆ ಪತ್ನಿಯರಲ್ಲಿ ನಿಹಿತವಾದಾಗ ಬೇರೆ ಬೇರೆ ರೂಪವನ್ನು ತಾಳಿತು..
ಅದಿತಿಯಿಂದ ಆದಿತ್ಯರು (ದೇವತೆಗಳು),
ದಿತಿಯಿಂದ ದೈತ್ಯರು,
ದನುವಿನಿಂದ ದಾನವರು,
ಕದ್ರುವಿನಿಂದ ಸರ್ಪಗಳು,
ವಿನತೆಯಿಂದ ಅರುಣ- ಗರುಡರೇ ಮೊದಲಾದ ಪಕ್ಷಿಗಳು..
ಹೀಗೆ ಬಗೆಬಗೆಯ ಜೀವ ಸಂತತಿಗಳು ಕಶ್ಯಪ ಕುಟುಂಬದಿಂದಲೇ ಉಗಮಿಸಿದವು..!
ಅದಿತಿ ಕಶ್ಯಪರ ಅಪೂರ್ವ ತೇಜಸ್ಸುಗಳ ಸಮಾವೇಶದಿಂದ ಆವಿರ್ಭವಿಸಿದವನೇ ಭಗವಾನ್ ಭಾಸ್ಕರದೇವ..
ಬೆಳಕಿನ ರಾಶಿಯೇ ಆದ ಆತನಿಂದ ಅತಿಶಯವಾಗಿ ಬೆಳಗುವ ವಂಶವೊಂದು ಅನಾವರಣಗೊಂಡಿತು..
ಅದುವೇ ತ್ರಿಲೋಕ ವಿಖ್ಯಾತವಾದ ಸೂರ್ಯವಂಶ..!
|| ಹರೇರಾಮ ||
September 30, 2010 at 9:35 AM
“ಕುಲವೆಷ್ಟು ಶುಧ್ಧವೋ ನಮ್ಮೆಡೆಗೆ ಈಶ್ವರನ ಚೈತನ್ಯದ ಹರಿವು ಅಷ್ಟೇ ನಿರಾತಂಕ” ವಾಹ್.. ಹೊಸ ನನಗೆ.. ಇಲ್ಲಿನ ಪ್ರತಿಯೊಂದು ವಾಕ್ಯವು ಅದ್ಭುತ-ರಮಣೀಯ-ರೋಚಕ-ರೋಮಾಂಚಕ.
ಧನ್ಯವಾದ ಗುರುಗಳೇ.
—
ನಿಂಗಳ
ಮಂಗ್ಳೂರ ಮಾಣಿ…
September 30, 2010 at 9:58 AM
ಹರೇರಾಮ.
ವಂಶವೆಂದರೆ ನಮ್ಮನ್ನು ದೇವರೊಡನೆ,
ಪ್ರಕೃತಬಿಂದುವನ್ನು ಪ್ರಥಮಬಿಂದುವಿನೊಡನೆ ಬೆಸೆಯುವ ಚೇತನ ಸೇತು..
ಇದು ಅರ್ಥವಾಗಬೇಕಾದರೆ ನಾವು ಹಿಂದೆ ಹಿಂದೆ ಹೋಗಬೇಕು.. ಎಂಬ ಮಾತುಗಳು ಒಂದು ಜೀವದ ೨ ಕರ್ತವ್ಯಗಳನ್ನ ಅಂದರೆ ವಂಶವನ್ನ ಗೌರವಿಸುವುದು ಹಾಗು ಹಿಂದೆ ಹೋಗುವುದರ ಬಗ್ಗೆ ನೆನಪಿಸಿಕೊಡುತ್ತಿದೆ. …
September 30, 2010 at 5:44 PM
ಹರೇರಾಮ ವೆಬ್ ಸೈಟೇ ನಮಗೆ ಮಠ.
ಗುರುಗಳು ಇಲ್ಲಿ ಕಾಣಿಸಿಕೊಳ್ಳದಿದ್ದರೆ – ಗುರುವಿಲ್ಲದ ಮಠದ೦ತೆ.
ದರ್ಶನವಾಯಿತು, ದೀಪ ಬೆಳಗಿತು, ಸತ್ವ ಜ್ಯೋತಿಯ ಬೆಳಕಲ್ಲಿ ಜಗವ ನೋಡ ಬಯಸುವೆವು, ಆ ಸುಪ್ರಕಾಶ ಇರದಿರೆ ಕಣ್ಮನವ ತೆರೆದು ಏನು ಪ್ರಯೋಜನ.
.
ಶ್ರೀ ಗುರುಭ್ಯೋ ನಮಃ
September 30, 2010 at 6:28 PM
“ನೀರ ಮೇಲೆ ನಾರಾಯಣನೊಬ್ಬನೇ ಪವಡಿಸಿದ್ದನ೦ದು..”
———————————————————
ಅ೦ದು, ಇ೦ದು, ಎ೦ದೆ೦ದೂ…?
.
“ಪುರುಷ ಏವೇದಮ್ ಸರ್ವಮ್ ಯದ್ಭೂತ೦ ಯಚ್ಚ ಭವ್ಯಮ್
ಉತಾಮೃತತ್ವಸ್ಯೇಶಾನಃ ಯದನ್ನೇನಾತಿರೋಹತಿ”
October 2, 2010 at 6:08 PM
ದೀಪಾವಳಿ. ನಕ್ಷತ್ರದ ದೀಪಾವಳಿ. ಆಗಸದೊಳು ಮಹಾವಿಷ್ಣುವಿನ ಚಿತ್ರ. ಪ್ರತಿ ದೀಪವು ಚಿತ್ರಣವ ಪೂರ್ಣ ಮಾಡಲು ಬೇಕಾಗಿದೆ.
September 30, 2010 at 8:42 PM
‘……..ವಂಶವೆಂದರೆ ಸೃಷ್ಟಿಯ ಮೊಟ್ಟಮೊದಲ ಶಕ್ತಿಯು ನಮ್ಮವರೆಗೆ ಹರಿದು ಬರುವ ಚೈತನ್ಯ ತಂತು.
ಭಾರತೀಯ ಸಂಸ್ಕೃತಿಯಲ್ಲಿ ಕುಲಕ್ಕೆ ಅದೆಷ್ಟು ಪ್ರಾಶಸ್ತ್ಯ..!
ಏಕೆಂದರೆ ಕುಲವೆಷ್ಟು ಶುದ್ಧವೋ ನಮ್ಮೆಡೆಗೆ ಈಶ್ವರನ ಚೈತನ್ಯದ ಹರಿವೂ ಅಷ್ಟೇ ನಿರಾತಂಕ……’
ನಮ್ಮ ಗುರು- ಶಿಷ್ಯ ಪರಂಪರೆ ಯಲ್ಲೂ ಇದೇ ವಿಶೇಷತೆ.
ಹರೇ ರಾಮ!
October 1, 2010 at 11:22 AM
ಮೋಡದಲ್ಲಿ ಮರೆಯಾಗಿದ್ದ ಸೂರ್ಯ. ಮತ್ತೆ ಉದಿಯಿಸಿದಂತಾಯಿತು !!!
October 1, 2010 at 11:41 AM
“ಶ್ರೀ ಗುರುಭ್ಯೋ ನಮಃ”
ದೀಪದಿಂದ ಎಷ್ಟೇ ದೀಪ ಹಚ್ಚಿದರೂ ಯಾವೊಂದು ದೀಪದ ತೇಜಸ್ಸಿನಲ್ಲೂ ಅಪವಿತ್ರತೆಯ ಸೋಂಕಿರದು; ಆದರೆ ವಂಶವಾಹಿನಿಯಲ್ಲೇಕೆ (ಇಂದು?) ಹೀಗೆ ಮಲಿನತೆಯ ವೃದ್ಧಿ?
“ಹರೇ ರಾಮ”
October 1, 2010 at 2:27 PM
Hareraama Samsthana
Kashyapa Gothradavaru Surya vamshadavara? Adee modala gothrava?
October 1, 2010 at 10:54 PM
ಆ ರೀತಿ ನೋಡಿದರೆ…. ಈ ಜಗತ್ತಿನ ಸಮಸ್ತ ಜೀವ ಕೋಟಿ ಗಳೆಲ್ಲವು ಕಾಶ್ಯಪ ಗೋತ್ರ ದವರೆ… ?
ಮಿಕ್ಕ ಗೋತ್ರ ಪ್ರವರ್ತಕ ಮಹರ್ಷಿಗಳ ಮೂಲ ಗೋತ್ರ ಯಾವುದು ಮತ್ತು ಯಾಕಾಗಿ ಭಿನ್ನ ಭಿನ್ನ ಗೋತ್ರ ಗಳಾದವು ಸಂಸ್ಥಾನ ?
October 5, 2010 at 10:10 AM
’ವಂಶವೆಂದರೆ ಸೃಷ್ಟಿಯ ಮೊಟ್ಟಮೊದಲ ಶಕ್ತಿಯು ನಮ್ಮವರೆಗೆ ಹರಿದು ಬರುವ ಚೈತನ್ಯ ತಂತು.’ Ultimate.
October 6, 2010 at 11:25 AM
ಹರೇರಾಮ ಸಂಸ್ಥಾನ,
{ವಂಶವೆಂದರೆ ದೇವರ ದೀಪೋತ್ಸವವಿದ್ದಂತೆ!!!! }
ಅದ್ಭುತ ಯೋಚನೆ!!!
ನಾವೆಲ್ಲಾ ದೇವರ ನಂದಾದೀಪದಿಂದ ಹೊತ್ತಿಸಿದ ದೀಪೋತ್ಸವದ ದೀಪಗಳಲ್ಲವೇ? ಪ್ರಥಮ ಬಿಂದುವಿಗೆ ಪ್ರಕೃತ ಬಿಂದುವನ್ನು ಸೇರಿಸುವ ಪ್ರಕ್ರಿಯೆಯ ಒಂದು ಭಾಗವಲ್ಲವೇ!!!!
ಇದುವರೆಗೆ ಬಾರದ ಒಂದು ಯೋಚನೆಗೆ ಹೊಸ ದಿಕ್ಕು ತೋರಿದ್ದೀರಿ.. ನಮ್ಮ ಅಸ್ತಿತ್ವಕ್ಕೂ ಇರುವ ಬೆಲೆ, ಜವಾಬ್ದಾರಿ ಅರಿತು ಅತೀವ ಸಂತೋಷ ಆಗ್ತಿದೆ..
ಧನ್ಯವಾದಗಳು ಸಂಸ್ಥಾನ… ಮನದಾಳದ ನಮನಗಳು..
{ಪಿತೃಗಳೆಂದರೆ ಪರಸ್ಪರ ಬೆಸೆದುಕೊಂಡು, ನಮ್ಮ – ಈಶ್ವರನ ಮಧ್ಯೆ ಸಂಪರ್ಕ ಕಲ್ಪಿಸುವ ಸಜೀವ ಕೊಂಡಿಗಳು.} ತುಂಬಾ ಚಂದದ ಮಾತು..
ನಾವು ಸಂಸಾರದ ನದಿಯ ಎರಡು ದಡಗಳನ್ನು ಬೆಸೆಯುವ ಸೇತುವೆಯ ಒಂದು ಚೈತನ್ಯ ಬಿಂದು ಅಲ್ಲವೇ?
ಕೆಲವು ಸಂದೇಹಗಳು ಇವೆ, ಸಂಸ್ಥಾನದ ಚರಣಗಳಲ್ಲಿ ಅರಿಕೆ ಮಾಡುತ್ತಿದ್ದೇನೆ…
ನಮ್ಮ ಪಿತೃಗಳಿಗೆ ಈಗಿನ ತಲೆಮಾರಿನ ಮೇಲೆ ಅಸಮಾಧಾನ ಆಗುವುದು ಇದೆಯೇ? ಅದು ಹೇಗೆ?
ಆ ಅಸಮಾಧಾನ ಮುಂದಿನ ಪೀಳಿಗೆಯ ಪುತ್ರರ ಮೇಲೆ, ಅವರ ಬುದ್ಧಿಯ ಮೇಲೆ ಪ್ರಭಾವ ಬೀರುವುದು ನಿಜವೇ?
ಒಂದು ವೇಳೆ ಹೌದಾದಲ್ಲಿ, ಆ ಸಮಯದಲ್ಲಿ ನಾವೇನು ಮಾಡಬಹುದು?
ಒಂದು ವೇಳೆ ಪ್ರಕೃತ ಬಿಂದು ಬಾಲಿಕೆಯೇ ಆದಲ್ಲಿ ವಂಶವಾಹಿನಿ ನಿಲ್ಲುವೆದೆ? ಅಥವಾ ಎರಡು ವಂಶ ಸೇರಿ ಒಂದಾಗಿ ಮುಂದುವರೆಯುವುದೇ?
ದಯವಿಟ್ಟು ತಿಳಿಸಿ ಕೊಡುತ್ತೀರಾ?
ಧನ್ಯವಾದಗಳು ಸಂಸ್ಥಾನ..
ಹರೇರಾಮ
October 22, 2010 at 7:23 AM
ನಾವು ದಾರಿ ತಪ್ಪಿದರೆ ಅದರ ದುಷ್ಪರಿಣಾಮ ಪಿತೃಗಳ ಮೇಲೇ ಆಗುವುದರಿಂದ, ಅವರ ಅಸಮಾಧಾನ ಸಹಜವೇ ಆಗಿದೆ..
ಅದು ಪುನಃ ನಮ್ಮ ಮೇಲೆ ದುಷ್ಪರಿಣಾಮ ಬೀರಿಯೇ ಬೀರುವುದು..!
ಪರಿಹಾರ :- ಪಿತೃಪ್ರೀತಿ
October 6, 2010 at 10:41 PM
ಪರಮಾತ್ಮ ನಾ ಎರಗಿದೆ ಚರಾಚರಕ್ಕೆ, ನಾ ಎರಗಿದೆ ತ೦ದೆ ನಿನಗೆ. ಎತ್ತ ನೋಟ ಎತ್ತ ಚಿತ್ತ, ಬೆಳಗುವ ಹೊರ ದೀಪಕ್ಕೆ ಬೆಳಗುವ ಒಳ ಜ್ಯೋತಿಗೆ ಬೆಸೆಯುವ ಕಾ೦ತಿಯ ತ೦ತಿಗಳಿಗೆ ಎರಗಿದೆ. ಕಣಕಣಕ್ಕೆ ಎರಗಿದೆ ಕಣಕಣವ ಧರಿಸಿದೆ ಭ್ರೂಮಧ್ಯ. ಪರಮಾತ್ಮ ನೀನಾರು ಅರಿವಾಯಿತು, ನಾನಾರು? ನಾರಾಯಣ, ಜಲದೊಳು ತರ೦ಗ ಮೂಡಿಸಿದೆ, ತಲ್ಲೀನತೆಯಿ೦ದ ತರ೦ಗಗಳ ನೋಡುತಿಹೆ, ಎರಗಿದೆ ತಲ್ಲೀನತೆಗೆ. ಎರಗಿದೆ ನಿನ್ನ ನಯನಗಳಿಗೆ, ಮುಚ್ಚಿದ ನಯನಕ್ಕೆ ಮೂಡಿದ ಮ೦ದಹಾಸಕ್ಕೆ ಎರಗಿದೆ. ನೀನಾರು? ಆ ಮುಚ್ಚಿದ ನಯನ, ನಾನಾರು? ನೀ ಹೊರಸೂಸುತ್ತಿರುವ ಮ೦ದಹಾಸ.
.
ಶ್ರೀ ಗುರುಭ್ಯೋ ನಮಃ
October 7, 2010 at 7:50 AM
ಭಾವ ಒ೦ದೇ ಇರಲು, ಭಾವ ಹೃದಯಗಳ ತಟ್ಟುತಿರಲು ಮುಟ್ಟುತಿರಲು, ಪದಗಳು ಬೇರೆಯಾದರು, ಪದಗಳ ಜೋಡನೆ ಬೇರೆಯಾದರು, ಭಾವ ಒ೦ದು, ಭಾವ ಸಿ೦ಧು, ಭಾವ ಬಿ೦ದು.
.
ಆದಿ ನಾರಾಯಣನ ಭಾವಕಾರುಣ್ಯಪುಷ್ಪವ ಕಮರಿಸದೇ, ನವಪುಷ್ಪದ೦ತೆ ಮತ್ತೆ ನವನವರಿಗೆ ದಾಟಿಸುವ ಮೃದು ಹಸ್ತದವರಿಗೆ ಸಿಗುವುದು ದಾಟಿಸುವ ಕಾರ್ಯ???
.
ಶ್ರೀ ಗುರುಭ್ಯೋ ನಮಃ
October 7, 2010 at 7:03 AM
ಗುರುಗಳೇ, ಕೆಲವು ಸಂದೇಹಗಳು.
ವಂಶೋದ್ದಾರವಾಗುವುದು ಗಂಡು ಸಂತಾನದಿಂದ ಮಾತ್ರವೆ? ಅದು ಹೌದಾದಲ್ಲಿ, ಕೇವಲ ಹೆಣ್ಣು ಸಂತಾನವಿರುವ ಮಾತಾಪಿತೃಗಳಿಗೆ ಮರಣಾನಂತರ ಸದ್ಗತಿ ಹೇಗೆ ದೊರಕುವುದು?
October 22, 2010 at 7:26 AM
ಗಂಡುಸಂತಾನದಿಂದ ಈ (ಹುಟ್ಟಿದ) ವಂಶದ ಉದ್ಧಾರ..
ಹೆಣ್ಣುಸಂತಾನದಿಂದ ಆ (ಕೊಟ್ಟ) ವಂಶದ ಉದ್ಧಾರ..
ಸಂತತಿ ಇಲ್ಲದವರ ಸದ್ಗತಿಗೆ ಸಾಧನೆಯೊಂದೇ ದಾರಿ…!
October 7, 2010 at 1:48 PM
ಪ್ರಕೃತಿಯ ಸೃಷ್ತಿಯ ಬಗ್ಗೆ ಎಷ್ಟು ಅಲೋಚಿಸಿದರೂ ನಿಗೂಢ ಎನಿಸುವ ವಿಶಯವನ್ನು ಸರಳವಾಗಿ ತಿಳಿಸಿದ ಶ್ರೀ ಶ್ರೀ ಗುರುಗಳಿಗೆ ಸಾಷ್ತಾಂಗ ಪ್ರಣಾಮಗಳು
ನಮ್ಮ ಸಂಪ್ರದಾಯದಲ್ಲಿ ದೀಪವನ್ನು ಆರಿಸುವ (ನಂದಿಸುವ) ಕ್ರಮ ಇಲ್ಲ. ಅದನ್ನು “ಕೂಡುವ” ಕ್ರಮದಲ್ಲಿ ಅದು ಸೇರುವುದು ಮೂಲ ಜ್ಯೋತಿಯನ್ನೇ ಅಲ್ಲವೇ
ನಮ್ಮೀ ಆತ್ಮವೆಂಬ ಜ್ಯೋತಿಯು ಆದಿಯಿಂದಲೇ ಬಂದುದು ಆದಿಗೆ ಸೇರಲೇ ಬೇಕಲ್ಲವೇ. ಹಾಗಾದರೆ ಜ್ಯೋತಿಯ ಗುಣವಾದ ಬೆಳಗುವಿಕೆ ನಮ್ಮ ಗುಣವವಾಗಬೇಕಲ್ಲವೇ. ಸಮಾಜಕ್ಕೆ ನಮ್ಮಿಂದ ಉಪಕಾರವಾಗಬೇಕೆಂದೇ ಆ ಆತ್ಮ ಜ್ಯೋತಿ ಈ ಶರೀರಕ್ಕೆ ದೊರಕಿದ ಸೌಭಾಗ್ಯವಲ್ಲವೇ
ಹರೇ ರಾಮ
October 24, 2015 at 5:57 AM
I feel saesfiitd after reading that one.