ಸೇರಿದವು ದಿವಿಭುವಿಗಳು . . . !

ಗುರುವಾರ, ಮಾರ್ಚ 11th, 2010 - - 10 Comments
ಕನಸೆಲ್ಲ ನನಸಾಗುವಂತಿದ್ದರೆ….???
ಕಲ್ಪನೆಯೆಲ್ಲ ವಾಸ್ತವವಾಗುವಂತಿದ್ದರೆ..?
ಒಳಗಣ್ಣಿಗೆ ಕಂಡದ್ದು ಹೊರಗಣ್ಣಿಗೂ ಕಾಣುವಂತಿದ್ದರೆ..?
‘ ಅಂದರ್ ರಾಮಾ ಬಾಹರ್ ರಾಮಾ…’
ಕಣ್ಮುಚ್ಚಿದಾಗ ಕಂಡ ಅನಂತ ಸುಂದರಮೂರ್ತಿಯೊಂದು ಕಣ್ಣೆದುರು ಬರುವಂತಿದ್ದರೆ…?
ಹುತ್ತಗಟ್ಟಿದ ಚಿತ್ತದಲ್ಲಿ ಚೈತನ್ಯಮೂರ್ತಿಯನ್ನು ಕಂಡ ಮುನಿಯ ಮನದಲ್ಲಿ ಹುಟ್ಟಿಕೊಂಡ ಪ್ರಶ್ನೆಯಿದು:

ಈ ಕಾಲದಲ್ಲಿ…ಈ ದೇಶದಲ್ಲಿ ಅಂಥವನೊಬ್ಬನಿರಲು ಸಾಧ್ಯವೇ..?
ದೋಷಗಳ್ಯಾವುವೂ ಇಲ್ಲ…!!
ಗುಣಗಳ್ಯಾವುವೂ ಇಲ್ಲದಿಲ್ಲ…!
ಇಂಥಾ ವ್ಯಕ್ತಿತ್ವವೊಂದನ್ನು  ನಾವು ಬದುಕಿರುವ ಭೂಮಿಯಲ್ಲಿ ನಾವು ಬದುಕಿರುವಾಗಲೇ ಕಾಣಲು ಸಾಧ್ಯವೇ..?

ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?

ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!

ಜ್ಯೋತಿಯಲ್ಲಿ ಸೇರಿದವು ದಿವಿ-ಭುವಿಗಳು...

ಜ್ಯೋತಿಯಲ್ಲಿ ಸೇರಿದವು ದಿವಿ-ಭುವಿಗಳು...

ಲೋಕೋತ್ತರವಾದ ರಾಮಾಯಣ…!!!

ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!

ನರನ ಪ್ರಶ್ನೆ ನಾರಾಯಣನನ್ನೇ ಮುಟ್ಟಿರಬೇಕು…!
ನಾರಾಯಣ ನಾರಾಯಣ ‘ ನಾಮೋಚ್ಚಾರದೊಡನೆ ನಾರದರು ನಾಕದಿಂದಿಳಿದು ಬಂದರು ವಾಲ್ಮೀಕಿಯೆಡೆಗೆ..!
ವಾಲ್ಮೀಕಿಯ ಮೂಲಕ ಭುವಿ ಕೇಳಿದ ಪ್ರಶ್ನೆಗೆ ನಾರದರ ಮೂಲಕ ದಿವಿಯ ಉತ್ತರ..
ಅದುವೇ ರಾಮಾಯಣ..!

ರಾಮಾಯಣವೆಂದರೆ ದಿವಿಭುವಿಗಳ ಸಂಗಮದ ಕಥೆ…
ದಿವಿಯಿಂದ ಭುವಿಗಿಳಿದು ಬಂದವನು ಶ್ರೀರಾಮ…!
ದೇವಲೋಕದಿಂದ ದೇವದೂತ ತಂದಿತ್ತ ದಿವ್ಯಪಾಯಸದಿಂದಲಲ್ಲವೇ ಶ್ರೀರಾಮನ ಆವಿರ್ಭಾವ…!
ಭುವಿಯಿಂದ ಮೇಲೆದ್ದು ಬಂದವಳು ಸೀತೆ..!
ಸಂಸ್ಕೃತದಲ್ಲಿ ಸೀತೆಯೆಂದರೆ ನೇಗಿಲ ರೇಖೆ..!
ಯಜ್ಞಸಮಯದಲ್ಲಿ ಭೂಮಿಯನ್ನುಳುವಾಗ ಜನಕನಿಗೆ ನೇಗಿಲರೇಖೆಯಲ್ಲಲ್ಲವೇ ಆಕೆ ಲಭಿಸಿದ್ದು…!!
ಅವರೀರ್ವರ ಸಮಾಗಮದ ಕಥೆಯೇ ರಾಮಾಯಣ…!!!

ಆದುದರಿಂದಲೇ ಇರಬೇಕು ವಾಲ್ಮೀಕಿ – ನಾರದರ ರೂಪದಲ್ಲಿ ದೇವಲೋಕ-ಭೂಲೋಕಗಳು ಸಂಗಮಿಸಿದಾಗ ರಾಮಾಯಣದ ಅವತಾರವಾಯಿತು…

ರಾಮಬಾಣ ;
ಕೌಸಲ್ಯಾ-ದಶರಥರ ಸಂಬಂಧದಲ್ಲಿ ಜಗತ್ತಿಗೆ ಶ್ರೀರಾಮ ಲಭಿಸಿದಂತೆ…
ವಾಲ್ಮೀಕಿ-ನಾರದರ ಸಂವಾದದಲ್ಲಿ ಜೀವಲೋಕಕ್ಕೆ ಶ್ರೀರಾಮಾಯಣದ ಅಲಭ್ಯಲಾಭವಾಯಿತು…!
  • ಜಗದೀಶ್ B. R.

    ಹರೇ ರಾಮ..

  • Raghavendra Narayana

    ನರ ರಾಮ+ರಾಮಾಯಣ ಮೂಲಕ ನಾರಾಯಣ ಆಗಬಹುದೆ?
    ಅನ೦ತ ಕೋಟಿ ಬ್ರಹ್ಮಾ೦ಡ ನಾಯಕನ ಸ೦ಗಮದ ಕಾವ್ಯ ಭೂಮಿಯಲ್ಲಿ ಸೀತೆಯೊ೦ದಿಗೆ..

  • vdaithota

    ಕನಸೆಲ್ಲ ನನಸಾಗುವಂತಿದ್ದರೆ….???
    ಕಲ್ಪನೆಯೆಲ್ಲ ವಾಸ್ತವವಾಗುವಂತಿದ್ದರೆ..?
    ರಾಮಾಯಾಣಾ ಕಥೆಯಾಗದೆ…
    ವಾಸ್ತವವೇ ಆಗಿರುತ್ತಿತ್ತು ಅಲ್ಲವೇ..??!!!

    • http://hareraama.in Sri Samsthana

      ಶ್ರೀರಾಮಾಯಣವೆಂಬುದು ಕಪೋಲಕಲ್ಪಿತಕಥೆಯಲ್ಲ . . . ಅದು ‘ ದರ್ಶನ ‘

      ವಾಲ್ಮೀಕಿ ಒಳಗಣ್ಣಾರೆ ಕಂಡ ಸತ್ಯ . . . ಅದೇ ವಾಸ್ತವ . . . ಭ್ರಮೆಯಲ್ಲಿರುವುದು ನಾವೇ . . . !

  • http://hareraama.in Sri Samsthana

    ನರ + ನಾರಾಯಣ = ‘ ಶ್ರೀರಾಮ ‘

  • vdaithota

    ಭ್ರಮಧೀನರಾಗಿರುವ ನಮಗೆ ರಾಮಾಯಣವೆಂದರೆ ಕೇವಲ ಪುಣ್ಯ ಕಥೆ ಅಲ್ಲಾ, ಅದುವೇ ವಾಸ್ತವ ಎಂಬ ಭಾವ ಹೊಂದಲು ಸಾಧ್ಯ ಎನ್ನುವಿರಾ ಗುರುದೇವಾ…???!!!! ತಮ್ಮನುಗ್ರಹದಿಂದ ಹಾಗೊಂದುವೇಳೆ ಆ ಭಾವದೊಳಗೆ ಲೀನವಾಗಲು ಸಾಧ್ಯವಾದರೆ!!!!!????
    ಕನಸು ನನಸಾಗುವುದು ಎಂದರೆ ಅದೇ ಅಲ್ಲವೇ??!!!
    ಹರೇ ರಾಮಾ….

  • shobha lakshmi

    munde…Ramayana kathe kelalu thudithavide..gurudevaa,,neevenu valmeeki gintha channagi kavya rachisutheeri,,dhanyavaada,,

  • RAVINDRA T L BHATT

    ತುಡಿತವೆಂತಹುದೋ ಕಾಣೆ,
    ಬಡಿತವಿಹುದೆದೆಯಲ್ಲಿ,
    ರಾಮ ಬರುವನೆಂದು,
    ಶ್ರೀರಾಮ ಬರುವನೆಂದು.

    ಹರುಷುದಿಂ ಬರಮಾಡಿ,
    ಪುರುಷ ರಾಮನ ಕಥೆಯ,
    ಮನದೊಳಗೆ, ತನುವೊಳಗೆ,
    ಗುರುವ ದಯೆಯೊಳಗೆ.
    ಶ್ರೀ ಗುರುಬ್ಯೋನಮಃ||

    • Raghavendra Narayana

      ಅದ್ಭುತ

  • Raghava Hegde

    hareraama,athyadbhutha.jai shriraam

Powered By Indic IME