“ನಿನ್ನ ಕೊನೆಯ ಕ್ಷಣ ಸನ್ನಿಹಿತವಾಗಿದೆ. ಇಷ್ಟದೇವರನ್ನು ಸ್ಮರಿಸು”
ಪ್ರಾಣಹಾರಿಯಾದ ಪ್ರಹಾರವನ್ನು ಮಾಡುವ ಮೊದಲು ವೀರನೊಬ್ಬ ಪ್ರತಿವೀರನಿಗೆ ಹೇಳುವ ಮಾತಿದು..!(
ವ್ಯಕ್ತಿ ದೇಹಾಂತ ಸಮಯದಲ್ಲಿ ಯಾವುದನ್ನು ಸ್ಮರಿಸುವನೋ, ಮುಂದೆ ಆತ ಅದೇ ಸ್ವರೂಪವನ್ನು ಹೊಂದುವನು.!
(ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ || – ಗೀತೆ )
ಜಿಂಕೆಯನ್ನು ಸ್ಮರಿಸುತ್ತಾ ಪ್ರಾಣ ಬಿಟ್ಟ ಭರತ ಜಿಂಕೆಯೇ ಆಗಿ ಹುಟ್ಟಬೇಕಾಯಿತು..
ದೇವರನ್ನು ಸ್ಮರಿಸುತ್ತಾ ಪ್ರಾಣ ಬಿಡುವವನು ದೇವರೇ ಆಗುವನು..
ಅದುವೇ ಮೋಕ್ಷ..
ಪುತ್ರವತ್ಸಲರು, ಮಿತ್ರವತ್ಸಲರು, ಭೃತ್ಯವತ್ಸಲರು, ಭಕ್ತವತ್ಸಲರು
ಎಲ್ಲೆಲ್ಲಿಯೂ ಸಿಗಬಹುದು..
ಆದರೆ ಶತ್ರುವತ್ಸಲರನ್ನು ಕಾಣಲುಂಟೇ..!?
ಹಾಗೊಮ್ಮೆ ಕಂಡರೆ ಅದು ಭಾರತದಲ್ಲಿ, ಭಾರತೀಯರಲ್ಲಿ, ಭಾರತೀಯರ ಯುದ್ಧಪರಿಭಾಷೆಯಲ್ಲಿ ಮಾತ್ರ..
ಶತ್ರುವಿಗೂ ಶಾಶ್ವತ ಶ್ರೇಯಸ್ಸನ್ನು – ಮೋಕ್ಷವನ್ನು ಹಾರೈಸುವ ಹೃದಯವೆಂತಹುದು..?
ಇಹದ ಬದುಕನ್ನು ಕೊನೆಗೊಳಿಸುವಾಗಲೂ ಪರದಲ್ಲಿ ಪರಮೋಚ್ಚಪದವಿಯನ್ನು ಕಟ್ಟಿಕೊಡುವ ಯುದ್ಧವಿಜ್ಞಾನವೆಂತಹುದು..?
ದ್ವೇಷ – ವಿಷಯದ ಮೇಲೆಮಾತ್ರ, ಜೀವದ ಮೇಲಲ್ಲ…
ನಶ್ವರ ಶರೀರದ ಮೇಲೆ ಪ್ರಹಾರ..
ಆದರೆ ಶಾಶ್ವತ ಆತ್ಮದ ಉದ್ಧಾರ…
ಭಾರತೀಯರ ಯುದ್ಧಕ್ರಮದಲ್ಲಿ ಸೋಲು ಯಾರಿಗೂ ಇಲ್ಲ…
ಎರಡೂ ಕಡೆ ಲಾಭವೇ..!!!!!
ಗೆದ್ದವನಿಗೆ ಭೂ ಸ್ವರ್ಗ….
ಸತ್ತವನಿಗೆ ಅದಕ್ಕಿಂತಲೂ ಮಿಗಿದಾದ ವೀರ ಸ್ವರ್ಗ – ಮೋಕ್ಷ..!!!!
ಯುದ್ಧದಲ್ಲಿಯೂ ಅಧ್ಯಾತ್ಮದ ಹರಿವೆಯನ್ನು ಹೊಂದಿದ, ವಿಶ್ವದ ಏಕೈಕ ಸಂಸ್ಕೃತಿ ಎಂದರೆ ಅದು ನಮ್ಮ ಸಂಸ್ಕೃತಿ, ಭಾರತೀಯ ಸಂಸ್ಕೃತಿ…!
ಭಾರತೀಯರ ಕೆಲವು ಯುದ್ಧ ನಿಯಮಗಳನ್ನು ಗಮನಿಸಿ:
ಶರಣಾಗತರಾದವರನ್ನು ಸಂಹರಿಸಬಾರದು..
ಶಸ್ತ್ರಕೆಳಗಿಟ್ಟವರನ್ನು ಸಂಹರಿಸಬಾರದು..
ಪಲಾಯನ ಮಾಡುತ್ತಿರುವವರನ್ನು ಸಂಹರಿಸಬಾರದು
ಕೂದಲು ಬಿಚ್ಚಿರುವಾಗ ಸಂಹರಿಸಬಾರದು..
(ಪುರುಷರಿಗಾಗಲಿ ಸ್ತ್ರೀಯರಿಗಾಗಲೀ ಕೂದಲು ಕಟ್ಟುವುದು ಹಿಂದಿನಕಾಲದಲ್ಲಿ ಕಡ್ಡಾಯವಾಗಿದ್ದಿತು)
ಈ ನಿಯಮಗಳ ಉದ್ದೇಶ,
ಎದುರಾಳಿ ಬದುಕಬಯಸಿದರೆ ಬದುಕಿಗೆ ಅವಕಾಶ ಮಾಡಿಕೊಡುವುದು..
ಹಾಗಿಲ್ಲದಿದ್ದರೆ ಸಾಯುವ ಸಿದ್ಧತೆಗೆ ಅವಕಾಶ ಮಾಡಿಕೊಡುವುದು..
ಸಿದ್ಧತೆ ಎಂದರೆ ಸ್ಮರಣೆ..
ಮರಣದ ಆ ಒಂದು ಕ್ಷಣದಲ್ಲಿ ಮಾಡುವ ಸ್ಮರಣೆ ಮುಕ್ತಿಯ ಮಹಾಮಂಗಲವನ್ನೇ ಕೊಡಮಾಡುವುದು..
ಪಲಾಯನ ಮಾಡುವಾಗ ಇರುವ ಭಯಗ್ರಸ್ತ, ವ್ಯಗ್ರ ಮನಸ್ಥಿತಿಯಲ್ಲಿ ಸತ್ತರೆ ಮುಂದಿನ ಗತಿ ಒಳ್ಳೆಯದಾಗದು..!!
ಕೂದಲು ಬಿಚ್ಚಿ ಹರಡಿ – ಹಾರಾಡುತ್ತಿರುವಾಗ ಮನಸ್ಸು ಚಂಚಲವಾಗಿರುತ್ತದೆ..!
ಕೂದಲುಗಳಿಗೂ ಚಿತ್ತವೃತ್ತಿಗಳಿಗೂ ನೇರ ಸಂಬಂಧ..!!
ಕೇಶ – ಪಾಶಗಳನ್ನು ಬಂಧಿಸುವುದು ಮನಃಸಂಯಮಕ್ಕೆ ಪೂರಕ..!
ಚಂಚಲ ಮನಸ್ಥಿತಿಯಲ್ಲಿ ಸಾವು ಬಂದರೆ ನಿಶ್ಚಲ ಮುಕ್ತಿ ಸಿಗಲು ಹೇಗೆ ತಾನೇ ಸಾಧ್ಯ..!!
ಇಂದು ನಾವು ಬಹಳ ಮುಂದುವೆರೆದಿದ್ದೇವೆ..!
ಬಿಲ್ಲು – ಬಾಣಗಳ ಸ್ಥಾನದಲ್ಲಿ ಬಂದೂಕು, ಬಾಂಬುಗಳು ಬಂದಿವೆ..!!
ಆದರೊಂದು ಪ್ರಶ್ನೆ..
ನಮ್ಮ ಪೂರ್ವಜರು ಶತ್ರುಗಳ ಕುರಿತು ತೋರಿಸುತ್ತಿದ್ದ ಕಾಳಜಿ, ವಾತ್ಸಲ್ಯ ಇಂದು ನಮ್ಮಲ್ಲಿ ಉಳಿದಿದೆಯೇ..?
ಅಂದು ಸೈನ್ಯಗಳ ಮಧ್ಯೆ ಮಾತ್ರವೇ ಯುದ್ಧಗಳು ನಡೆಯುತ್ತಿದ್ದವು..
ನಿರಪರಾಧಿಗಳು ಸಾಯುವ ಮಾತೇ ಇರಲಿಲ್ಲ..!!
ಸೈನಿಕ ಸಾವಿಗೆ ಸಿದ್ಧನಾಗಿಯೇ ಮನೆಯಿಂದ ಹೊರಡುತ್ತಿದ್ದ..!
ಆತನನ್ನಾಶ್ರಯಿಸಿದ್ದವರೂ ಕೂಡಾ ಬರಬಹುದಾದ ವಿಪತ್ತಿಗೆ ಸಿದ್ಧರಾಗಿರುತ್ತಿದ್ದರು..
ಸಾವಿನ ಕೊನೆಯಕ್ಷಣಗಳು ಸಾವಿನ ನಂತರದ ಬದುಕನ್ನು ಕಟ್ಟಿಕೊಡುತ್ತವೆ..
ಆದರೆ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದು ಸಾವಿನ ಮುನ್ಸೂಚನೆ ಇದ್ದಾಗ ಮಾತ್ರ..!!
ಅತ್ತ ಸೈನಿಕನು ಸಾವಿಗೆ ಸಿದ್ಧನಾದರೆ, ಇತ್ತ ಅವನವರು ಅವನಿಲ್ಲದ ಬದುಕಿಗೆ ಸಿದ್ಧರಾಗಿರುತ್ತಿದ್ದರು..!
ಆದರೆ ಇಂದಿನ ಯುದ್ಧಗಳು ಸೈನ್ಯಗಳು – ಸೈನಿಕರ ನಡುವೆ ಮಾತ್ರವೇ ನಡೆಯುವುದಿಲ್ಲ..!
ಇಂದಿನ ಯುದ್ಧತಂತ್ರದಲ್ಲಿ ಮುಗ್ಧ ಜನಗಳೇ ಮುಖ್ಯ ದಾಳಗಳು..!!
ಇಂದಿನ ಕ್ಷಿಪಣಿಗಳಿಗೆ ಮಹಾನಗರಗಳೇ ಮುಖ್ಯ ಗುರಿಗಳು..!
ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಿದರೆ ಸಾಯುವವರು ಅಮಾಯಕರಲ್ಲವೇ..?
ಧ್ವಸ್ತವಾಗುವುದು ಅವರ ಜೀವನ ವ್ಯವಸ್ಥೆಗಳಲ್ಲವೇ..?
ಈ ರೀತಿಯ ಯುದ್ಧದಲ್ಲಿ, ಸಾಯುವವರಲ್ಲಿ ಸಾವಿನ ಸಿದ್ಧತೆಯಾಗಲೀ ಅಥವಾ ಅವರನ್ನು ನಂಬಿದವರಲ್ಲಿ ಮುಂದಿನ ಜೀವನದ ಸಿದ್ಧತೆಯಾಗಲೀ ಇರಲು ಸಾಧ್ಯವೇ..?
ಅಂದು ಯುದ್ಧದ ನಿರ್ಣಯವನ್ನು ಕೈಗೊಳ್ಳುತ್ತಿದ್ದ ರಾಜರು, ಸೇನಾಪತಿಗಳು ಸ್ವಯಂ ಯುದ್ಧಭೂಮಿಯನ್ನು ಪ್ರವೇಶಿಸಿ ಯುದ್ಧದ ನೇತೃತ್ವವನ್ನು ವಹಿಸುತ್ತಿದ್ದರು..!
ತಾವು ಕೈಗೊಂಡ ನಿರ್ಣಯದ ಪರಿಣಾಮವನ್ನು ಸಾಕ್ಷಾತ್ ತಾವೇ ಸ್ವೀಕರಿಸುತ್ತಿದ್ದರು..!!
ಇಂದು………??
ಯುದ್ಧದ ನಿರ್ಣಯವನ್ನು ಕೈಗೊಳ್ಳುವವರು ಸಕಲ ವಿಧದ ರಕ್ಷಣೆಯ ಸುಭದ್ರ ಕೋಟೆಯಲ್ಲಿ ಸುರಕ್ಷಿತರಾಗಿರುತ್ತಾರೆ…..!!!!
ಸಾಯುವವರು ಸೈನಿಕರು ಮತ್ತು ಸಾಮಾನ್ಯ ಜನತೆ ಮಾತ್ರ..!!
ನಮ್ಮ ಪ್ರಗತಿ ತಂತ್ರಜ್ಞಾನದಲ್ಲಿ ಮಾತ್ರ..!
ಮಾನಸಿಕತೆಯಲ್ಲಿ ನಾವು ಅದೆಷ್ಟು ಹಿಂದುಳಿದಿದ್ದೇವೆ..!!
ದ್ವಾವಿಮೌ ಪುರುಷೌ ಲೋಕೇ ಸೂರ್ಯಮಂಡಲ ಭೇದಿನೌ |
ಪರಿವ್ರಾಟ್ ಯೋಗಯುಕ್ತಶ್ಚ ರಣೇ ಚ ಅಭಿಮುಖೋ ಹತಃ ||
ಜಗದ ಕೋಟ್ಯಂತರ ಜೀವರಾಶಿಗಳಲ್ಲಿ ಈರ್ವರು ಮಾತ್ರವೇ ಸೂರ್ಯ ಮಂಡಲವನ್ನು ಭೇದಿಸಿ ಮುಂದೆ ಸಾಗುವರು..
ಪರಮೇಶ್ವರನನ್ನು ಹೊಂದುವರು..
ಯೋಗಯುಕ್ತನಾಗಿ ದೇಹ ಬಿಡುವ ಯೋಗಿಯೊಬ್ಬ..
ಯುದ್ಧದಲ್ಲಿ ಅಭಿಮುಖನಾಗಿ ಹೋರಾಡುತ್ತಾ ಪ್ರಾಣಾರ್ಪಣೆ ಮಾಡುವ ಯೋಧನೊಬ್ಬ..
ಯೋಧನೂ ಯೋಗಿಯೇ. . .
ಯುದ್ಧವೂ ಯೋಗವೇ…..!!!!!
ಇದು ಭಾರತ . . . !
ಇದು ಭಾರತೀಯತೆ. . . !!
ಇವರು ಭಾರತೀಯರು. . . !!!
ರಾಮಬಾಣ :
ವಿರಾಧವಧ ಪಂಡಿತಾಯನಮಃ ||ಇದು ಶ್ರೀ ರಾಮನ ಆಷ್ಟೋತ್ತರ ನಾಮ ನಮನಗಳಲ್ಲೊಂದು..
ವಿರಾಧರಾಕ್ಷಸನ ವಧೆಯಲ್ಲಿ ಪಾಂಡಿತ್ಯವೇನಿರಬಹುದಪ್ಪಾ..!!??
February 4, 2010 at 12:07 PM
ಇಂತಹ ದೇಶದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಎನಿಸುತ್ತದೆ.
ಆ ಕಡೆ ಯೋಗಿಯೂ ಅಲ್ಲ ಈ ಕಡೆ ಯೋಧನೂ ಅಲ್ಲದ ಯಡಬಿಡಂಗಿ ನಾನು. ಯೋಧ ಅಂತೂ ಆಗ್ಲಿಕ್ಕೆ ಸಾಧ್ಯವಿಲ್ಲ, ಯೋಗಿ ಆಗೊ ಶಕ್ತಿ ಆ ದೇವರು ಕರುಣಿಸಬೇಕು. ಗುರುಗಳ ಆಶೀರ್ವಾದ ಬೇಕು.
February 4, 2010 at 12:52 PM
ಎಲ್ಲಾ ಜನ್ಮಗಳಲ್ಲೂ, ಯಾವ ರೂಪದಲ್ಲೇ ಆಗಲಿ, ಭಾರತ ಪುಣ್ಯ ಭೂಮಿಯಲ್ಲೇ ಜನಿಸುವ ಭಾಗ್ಯ ದಯಪಾಲಿಸು ದೇವಾ…
February 4, 2010 at 3:33 PM
Shri Gurubyo Namaha.
Fantastic article. These are some rare topics, also we do not usually look from the angle presented in the article…. in all these articles.
These articles does not crib only about problems like many of us do, it identifies the known and unknown issues/topics/mistakes in polite way and shows simple paths to overcome it.
Wish the great “Bharatha” culture is completely back, and we start playing again with “Jnana”. Wish the lust of materialist life be completely destroyed with the “Light of Jnana”. Wish at least one step forward on each day/week/month towards the playground where people play with “Jnana”, see it, practice it, play it, become part of it, become it…
Sarvam Shivam. Shiva is the greater player and Coacher of this game. Wish we join his team. What is the eligibility???
February 4, 2010 at 4:49 PM
“ಯೋಧನೂ ಯೋಗಿಯೇ. . .
ಯುದ್ಧವೂ ಯೋಗವೇ…..!!!!!”
ಈ ಲೇಖನಗಳು ನಮಗೆ ಯೋಗವೆ. ಸ್ವಲ್ಪವಾದರು ಅಳವಡಿಸಿಕೊಳ್ಳದಿದ್ದರೆ ಯೋಗ್ಯವೇ? ಶಿವ ಮೆಚ್ಚಲಾರ.
February 4, 2010 at 3:35 PM
ಗುರುಚರಣಗಳಲ್ಲಿ ಕ್ಷಮೆ ಬೇಡುತ್ತಾ…
ಅಗ್ರತಶ್ಚತುರೋವೇದಾಃ ಪೃಷ್ಠತಸ್ಸಶರಂ ಧನುಃ
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ. ಇದು ಭಾರತರ ಸ್ವಭಾವ
ವಿಶ್ವಾಮಿತ್ರ, ಭಾರ್ಗವರಾಮರಂತಹ ಚೇತನಗಳ ುದಾಹರಣೆ ನಮ್ಮೊಂದಿಗಿದೆ…
ಯೋದ್ಧನೂ ಯೋಗಿಯೆ…. ಯೋಗಿಯೂ ಯೋದ್ಧನೇ….
ಯೋದ್ಧ ಹೊರ ಜಗತ್ತಿನ ಶತ್ರುಗಳ ಜೊತೆ ಹೋರಾಡುತ್ತಾ ಜೀವನವನ್ನು ಅರ್ಥೈಸಿಕೊಂಡರೆ, ಯೋಗಿ ಅಂತರಂಗದ ಶತ್ರಗಳೊಡನೆ ಹೋರಾಡುತ್ತಾ ಜೇವನವನ್ನು ಕಂಡುಕೊಳ್ಳುತ್ತಾನೆ.. ಎರಡೂ ಯುದ್ಧವೇ…
ಹಾಗಾಗಿ ಒಂದು ಹಂತ ದಾಟಿದ ನಂತರ ಯೋಗಿಯೂ… ಯೋದ್ಧನೂ… ಸಮಾನರು, ಸಮಪಕ್ವರು…
ಸೂರ್ಯವಂಶದವರ ವಿಶೇಷತೆಯನ್ನುಹೇಳುವಂತೆ
ಬಾಲ್ಯೇ ಅಭ್ಯಸ್ತ ವಿದ್ಯಾನಾಂ ಯೌವನೇ ವಿಷಯೈಷಿಣಾಂ
ವಾರ್ಧಕ್ಯೇ ಮುನಿವೃತ್ತೀನಾಂ ಯೋಗೇನಾಂತ್ಯೇ ತನುತ್ಯಜಾಮ್ …ಇದು ಭಾರತೀಯರ ಆದರ್ಶ,
ಇಂತಹ ಜೀವನ ಎಷ್ಟು ಸುಂದರ…
ಅರಿತು ಮಾಡುವುದು ಪಂಡಿತರ ಕೆಲಸ… ವಧಾಕಾರ್ಯದಲ್ಲೂ ಪಾಂಡಿತ್ಯವನ್ನು ಹೊಂದಿರಬುಹುದಾದವನು ಶ್ರೀರಾಮಚಂದ್ರ ಮಾತ್ರವೇ ಇರಬಹುದಲ್ವಾ…
ಪ್ರಣಾಮಗಳು..
February 4, 2010 at 4:21 PM
ಲೇಖನ ತುಂಬಾ ಚೆನ್ನಾಗಿದೆ
ಸಾವಿನಲ್ಲೂ ಪರಮಾತ್ಮನ ದರ್ಶನ ….ಕಾಣುವಂತೆ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿ,
‘ಯೋಧ’ ಆಗಲಾಗದ ….ಕಾರಣ, ಯೋಗಿಗಳ ಮಾರ್ಗದರ್ಶನ ಬೇಕು ಅಂತ ಪ್ರಾರ್ಥನೆ….
ವಂದೇ ಗುರುಣಾಂ ಚರಣಾರವಿಂದೆ
ಸಂದರ್ಶಿತಸ್ವಾತ್ಮ ಸುಖಾವ ಬೋಧೆ |
…………………………….
…………………………….
February 5, 2010 at 9:28 AM
ಅರಿಷಡ್ವರ್ಗಗಳ ನಿವೃತ್ತಿ ಗೆ ಯೋಧಳಾಗು
February 4, 2010 at 11:06 PM
ಗುರುದೇವಾ, ನಿಜ ಜೀವನವೂ ಒಂದು ಯುಧ್ಧವೇ ಅಲ್ಲವೇ?
ಜನ್ಮ ಜನ್ಮಾಂತರದ ಸಂಚಿತವಾದ ಕರ್ಮಗಳಿಂದ ಉತ್ಪನ್ನವಾದ/ಉತ್ಪನ್ನವಾಗುವ ರಜ:-ತಮ:ಗಳ, ಆಸುರೀ ಪ್ರವೃತ್ತಿಗಳ, ಅಜ್ನಾನದ ವಿರುಧ್ಧ ನದೆಸುವ ಯುಧ್ಧ!
ಸದ್ಗುರುವಿನಿಂದ ಕೊಡಲ್ಪದುವ ಜ್ನಾನ, ಉಪದೇಶಗಳು, ಏಕಾಗ್ರಚಿತ್ತನಾಗಿ ನಡೆಸುವ ಧ್ಯಾನ-ತಪಸ್ಸುಗಳೆಂಬ ಅಂತರ್ಯಜ್ನಗಳೇ ಅಸ್ತ್ರ ಶಸ್ತ್ರಗಳು.
ಬೇರೆ ಯುಧ್ಧಗಳಲ್ಲಿ ಸೋತು ಸಾಯಬಹುದು
ಆದರಿಲ್ಲಿ ಸೋಲು ಇಲ್ಲ.
ಮತ್ತೆ ಮತ್ತೆ ಸಾಯುವ ಸಾವೇ ಇಲ್ಲ.(ಹುಟ್ಟು-ಸಾವು)
ಯಾಕೆಂದರೆ ಪಥದರ್ಶಕ, ಶಿಷ್ಯರೆಂಬ ಸೈನಿಕರಿಗೆ ಶಿಕ್ಷಕ ಸದ್ಗುರು ಅಲ್ಲವೇ ಗುರುದೇವಾ?
ನಮೋ ಗುರುಭ್ಯಾಂ, ಗುರು ಪಾದುಕಾಭ್ಯಾಂ.
February 4, 2010 at 11:32 PM
ಯೋಗಿ ಮತ್ತು ಯೋಧ, ಅದ್ಭುತ ಹೋಲಿಕೆ.
———————————————–
ಇಬ್ಬರಲ್ಲೂ ನಡೆಯುವ, ಒಳ ಮತ್ತು ಹೊರ ಆಕ್ರಮಣ ಎಷ್ಟು, ಆಕ್ರ೦ದನ ಏಷ್ಟು. ಅದೇಷ್ಟೋ ಬಾರಿ ಇಬ್ಬರೂ ಏಕಾ೦ಗಿಗಳೆ.
ಇಬ್ಬರೂ ಗಡಿಯ ಮೇಲೆಯೆ ನಿಗಾ ಇಟ್ಟಿರುವರು.
ಯೋಧನಿಗೆ ಗಡಿಯನ್ನು ರಕ್ಷಿಸುವಲ್ಲಿ, ಯೋಗಿಗೆ ಗಡಿಯನ್ನು ದಾಟುವಲ್ಲಿ. ಇಬ್ಬರ ಆನ೦ದವೂ ಸೀಮಾತೀತ, ಅದ್ವಿತೀಯ.
ಸಾವನ್ನೆ ಸ್ವಾಗತಿಸುವ, ಸಾವಿಗೇ ನೋವನ್ನು ಕೊಡುವ, ಇವರ ಸಾವು – ಅದ್ಯಾವ ಸ್ವರ್ಗ ತಾನೆ ಸ್ಥಾನ ಕಲ್ಪಿಸಲು ಸಖ್ಯವಾದೀತು.
ಸಾವಲ್ಲಿ ಹುಟ್ಟುವ ಇವರ ಆನ೦ದದ ಕಣ್ಣೀರಿನ ಬಿ೦ದು, ಪರಮಾತ್ಮನಿಗಲ್ಲದೇ ಬೇರೆ ಯಾರಿಗೆ ಅರ್ಪಿತವಾಗಲು ಯೋಗ್ಯ. ಇದು ಸಾವೋ ಅಥವಾ ಹುಟ್ಟೋ.
.
“ವೀರಸ್ವರ್ಗ” – ಕೇವಲ ಕೇಳಿದರೆ, ಮೈಯಲ್ಲಿ ಶಕ್ತಿ ಸ೦ಚಲನವಾಗುತ್ತದೆ.
.
ಯೋಗಿಗೆ ಅ೦ತರ೦ಗದಲಿ ಬೆಳಕಿನಾಟ, ಬಹಿರ೦ಗದಲಿ ಯೋಧನಿಗೆ ನೆತ್ತರ ಓಕುಳಿಯಾಟ, ಇಬ್ಬರಿಗೂ ಕೃಷ್ಣನ ಗೀತೆಯ ರ೦ಗಿನ ಒಡನಾಟ.
.
ಹೋರು ಧೀರತೆಯಿ೦ದ, ಮೊ೦ಡುತನದಿ೦ ಬೇಡ |
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ||
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿ೦ದ – ಮ೦ಕುತಿಮ್ಮ ||
ಹೋರಾಡು ಬೀಳ್ವನ್ನಮೊಬ್ಬ೦ಟಿಯಾದೊಡ೦ |
ಧೀರಪಥವನೆ ಬೆದಕು ಸಕಲಸಮಯದೊಳ೦ ||
…. – ಮ೦ಕುತಿಮ್ಮ
February 6, 2010 at 1:09 AM
ಮುತ್ತಿನಂಥಾ ಮಾತುಗಳು . . . ಮನ ಮುಟ್ಟಿದವು . . . !
February 6, 2010 at 10:30 AM
ಗುರು ಹಾಕಿದ ಬಿಕ್ಷನ್ನ, ಗುರುಗಳ ಆಶೀರ್ವಾದ.
February 5, 2010 at 7:56 AM
ಗುರುಗಳೇ, ಸಾವಿನ ಘಳಿಗೆಯಲ್ಲಿ ನಾವು ಎನನ್ನು ಬಯಸುತ್ತೇವೆಯೊ ಖ೦ಡಿತ ಅದೇ ಆಗುತ್ತೇವೆಯೆ?
ಇದಕ್ಕೆ ಪ್ರಾರಬ್ಧ, ಋಣ, ಶೇಷ ಕರ್ಮಗಳ ತಡೆ ಇಲ್ಲವೆ?
ಈ ಬಯಕೆಗಳು ಸಾವಿನ ಕೊನೆಯ ದಿನಗಳಲ್ಲಿ ಬ೦ದರೆ ಸಾಕೆ ಅಥವಾ ಜನ್ಮಗಳ ಸಾಧನೆಯೆ?
ಮನಃಪೂರ್ವಕವಾಗಿ ಬಯಸಿದ್ದೊ? ಅಥವಾ ಸುಮ್ಮನ್ನೆ ಬಾಯಲ್ಲಿ ಹೇಳಿದ್ದೊ?
ಮೋಕ್ಷವೆ೦ಬ ಪರಮ ಗತಿಯನ್ನು ಬಯಸಬೇಕಾದರೆ ಹೇಗೆ ಬಯಸಬೇಕು? ದಯವಿಟ್ಟು ತಿಳಿಸಿ.
February 5, 2010 at 7:05 PM
ದ್ವೇಷ – ವಿಷಯದ ಮೇಲೆಮಾತ್ರ, ಜೀವದ ಮೇಲಲ್ಲ…
-Chanaagide.. 🙂
February 6, 2010 at 2:02 AM
|| ಹರೇ ರಾಮ ||
ತಲೆ ಬರಹವು ಐತಿಹಾಸಿಕ ಮತ್ತು ಆಧುನಿಕ ಜೀವನ ಕ್ರಮವನ್ನು ಪ್ರತಿನಿಧಿಸುತ್ತಿದೆ. ಮೋಕ್ಷದಾಟವು ಮೋಸದಾಟವಾಗಿ ಬದಲಾಗಿದ್ದನ್ನು ಸೂಚ್ಯವಾಗಿ ಎಲ್ಲರ ಮನ ಮುಟ್ಟುವಂತೆ ವಿವರಿಸಲಾಗಿದೆ.
ಇಂದು ಭಾರತೀಯ ಯುದ್ದ ಪದ್ದತಿಯನ್ನು ಪಾಶ್ಚಾತ್ಯ ಪದ್ದತಿಯನ್ನು ಅಳವಡಿಸಿಕೊಂಡಿದ್ದರಿಂದ ಜೀವನ ವ್ಯವಸ್ಥೆ ಧ್ವಸ್ತವಾಗಿದೆ. ಹಲವಾರು ವರ್ಷಗಳ ಭಾರತ ಭೂರಮೆಯ ಆಳಿದ ರಾಜ್ಯಭಾರ ಪದ್ದತಿಯನ್ನು ಕಡೆಗಣಿಸಿ ಕೆಲವು ವರ್ಷಗಳ ಕಾಲ ಆಳಿದ ಪಾಶ್ಚಾತ್ಯರ ರಾಜ್ಯಭಾರ ಪದ್ದತಿಯನ್ನು ಅನುಕರಿಸುತ್ತಿರುವುದು ನಿತ್ಯ ಕಾಯುವ ಸೈನಿಕರ ಹಾಗೂ ಅಮಾಯಕರ ಮಾರಣಹೋಮಕ್ಕೆ ಕಾರಣವಾಗಿದೆ. ಹಿಂದೆ ಧರ್ಮದ ಆಧಾರದಲ್ಲಿ ಆಡಳಿತ ನಡೆಯುತ್ತಿತ್ತು. ಆದರೆ ಇಂದು ಧನದ ಆಧಾರದಲ್ಲಿ ಆಡಳಿತ ನಡೆಯುತ್ತಿದೆ. ಇನ್ನೆಲ್ಲಿ ಅವರು ಯುದ್ಧ ಭೂಮಿಗೆ ಕಾಲಿಡುತ್ತಾರೆ.
—
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ ||
|| ಹರೇ ರಾಮ ||
February 6, 2010 at 7:33 PM
ಹರೇರಾಮ
ಜೈ ಶ್ರೀರಾಮ
February 6, 2010 at 7:36 PM
ಹರೇರಾಮ
ಹರೇ ರಾಮ ಹರೇ ರಾಮ/ ರಾಮ ರಾಮ ಹರೇ ಹರೇ/ ಹರೇ ಕ್ರಷ್ಣ ಹರೇ ಕ್ರಷ್ಣ /ಕ್ರಷ್ಣ ಕ್ರಷ್ಣ ಹರೇ ಹರೇ
February 7, 2010 at 9:02 AM
“(ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ || – ಗೀತೆ )”
ಸು೦ದರ ಶ್ಲೋಕ.
.
ಮನಃಶಾಸ್ತ್ರವೆ೦ಬ ಬರಿಯ ಕಣ್ಣಿಗೆ ಕಾಣದ ವಿಸ್ಮಯ ಲೋಕ. ಕಲ್ಪನೆಗೆ ನಿಲುಕದ ದೊಡ್ಡ ಲೋಕ – ಅಥವಾ – ಅ೦ತ್ಯದಲಿ ಅರಿಯಲ್ಪಡುವ ಅತ್ಯ೦ತ ಸಣ್ಣ ಏಕೈಕ ಭಾವ-ಲೋಕ? ನೀಲಾಕಾಶದಲಿ ನೀಲಿಯನ್ನು ಹುಡುಕುವ ಹುಚ್ಚು, ಶಾಲಿಗ್ರಾಮದಲಿ ಕಪ್ಪೇಕೆ ಎ೦ದು ತಿಳಿಯುವ ಆಟ, ಆಟ-ಕೂಗಾಟ-ಜ೦ಜಾಟ-ದೊ೦ಬಾರಟ-ಹುಚ್ಚಾಟ-ಹುಡುಕಾಟ, ಮೈ ಮನ ಸ೦ಪೂರ್ಣ ಬಳಲಿದಾಗಲಷ್ಟೆ ಸಿಗುವ ಉತ್ತರ, ಬಳಲಿ ಬಿಟ್ಟು ಬಿದ್ದಾಗಲಷ್ಟೆ ಕಾಣಿಸುವ ಪಾದ, ಹುಡುಕಿ ಹೊರಟವರ ಒಬ್ಬೊಬ್ಬರ ಕಥೆಯೂ ಮಹಾ ಕಾವ್ಯ.
.
ನಮ್ಮ ಋಷಿಮುನಿಗಳ ಕಾವ್ಯ/ಗ್ರ೦ಥ/ಅನುಭವಗಳ ಮೃಷ್ಟಾನ್ನವನ್ನು ಸವಿಯದೆ ಇರಲು ನಮಗೆ ಸಕ್ಕರೆ ಕಾಯಿಲೆಯೆ? ಬಡಿಸಿಕೊಳ್ಳುವ, ಬಳಸಿಕೊಳ್ಳುವ.
ಬಿಕ್ಷಾಪಾತ್ರೆಯ ಅರ್ಥ ಏನಿದ್ದಿರಬಹುದು?
.
ನಮ್ಮ ಋಷಿಮುನಿಗಳ ಪಾಠಗಳ ಪಾಠಶಾಲೆಗಳ ಉಳಿಸುವ ಬೆಳೆಸುವ ಶಕ್ತರೆಲ್ಲಿ………… ಮೃಷ್ಟಾನ್ನ ಉ೦ಡರೆ, ನಮಗೆ ಶಕ್ತಿ ಬರಬಹುದೆ?
ದೇಹಕ್ಕೆ ರೋಗ ಮನಸ್ಸಿನಿ೦ದ, ಮನಸಿನ ರೋಗಕ್ಕೆ ವೈದ್ಯ ಕೃಷ್ಣ, ಮದ್ದು ಮುರಲಿಯಿ೦ದ, ನಾದದಿ೦ದ, ನಾದವೆ ನಾನದೊಡೆ, ಮನಸೆಲ್ಲಿ ದೇಹವೆಲ್ಲಿ ರೋಗವೆಲ್ಲಿ.
ಸರ್ವ ಶಿವಮಯ೦.
December 28, 2013 at 2:49 PM
HARERAAMA, LEKHANA MANA MUTTUVANTHIDHE.
January 15, 2015 at 11:29 AM
GOOD Artical ….. HARERAMA…….
January 18, 2015 at 11:37 AM
ಹರೇರಾಮ.
ಅತ್ಯ೦ತ ಮಾರ್ಮಿಕವಾಗಿದೆ ಪ್ರಸ್ತುತವೂ ಆಗಿದೆ.